ಬಂಟ್ವಾಳ: ನಮ್ಮ ಶಾಲೆಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಅಳವಡಿಸಲಾಗಿಲ್ಲ. ವಿಟಮಿನ್ ಮಾತ್ರೆ ಸರಬರಾಜು ಮಾಡಿಕೊಡಿ ಎಂದು ಮಕ್ಕಳ ಆರೋಗ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸಿ.ದ್ದಾರೆ. ಕಾವಳಪಡೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳು ಆರೋಗ್ಯ ಇಲಾಖೆಯ ಗಮನ ಸೆಳೆದರು. ಶಾಲೆಯಲ್ಲಿ ನಡೆಯುವ ಮಕ್ಕಳ ಬಿಸಿಯೂಟ ಯೋಜನೆಯನ್ನು ಎರಡು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಬೇಕೆಂದು ವಿನಂತಿಸಿಕೊಂಡರು. ಮಕ್ಕಳ ಪ್ರಶ್ನೆಗೆ ಉತ್ತರ ವೈದ್ಯಾಧಿಕಾರಿ ಡಾ. ಸೋಹನ್ ಕುಮಾರ್ ಅವರು, ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವ ಜಾನಪದ ನೃತ್ಯ ಸಹ ಕಲಾವಿದರಿಗೆ ಪುರಸ್ಕಾರ ಸಿಗುತ್ತಿಲ್ಲ ಎಂದು ಪ್ರಶ್ನಿಸಿದ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ಗಮನ ಸೆಳೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆಯ ಇಸಿಒ ರಾಜೇಶ್ ಕ್ರಮ ಜರಗಿಸುವುದಾಗಿ ತಿಳಿಸಿದರು. ಶಿಕ್ಷಕರ ತರಬೇತಿಯನ್ನು ಶಾಲಾ ರಜಾ ದಿನಗಳಲ್ಲಿ ಏರ್ಪಾಡು ಮಾಡುವಂತೆ ಒತ್ತಾಯಿಸಿದರು.
ಬಿ.ಸಿ.ರೋಡ್ – ಬೆಳ್ತಂಗಡಿ ಕಡೆಗೆ ಸಂಚರಿಸುವ ಬಸ್ ಗಳಿಗೆ ಶಾಲಾ ವಠಾರದಲ್ಲಿ ನಿಲುಗಡೆ ಸೂಚನೆ ನೀಡುವಂತೆ ಕೆಎಸ್ಸಾರ್ಟಿಸಿಗೆ ಸೂಚನೆ ನೀಡಬೇಕು. ಶಾಲಾ ಸಮಯಗಳಲ್ಲಿ ಮಕ್ಕಳಿಗೆ ಸಂಚರಿಸುವ ಅನುಕೂಲವಾಗುವಂತೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ವಠಾರದಲ್ಲಿ ಕಸದ ತೊಟ್ಟಿ, ಜಲ ಮರು ಪೂರಣ, ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ, ಚರಂಡಿ, ರಸ್ತೆ ಸುಧಾರಣೆ, ಸೂಚನಾ ಫಲಕ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದಾಗಿ ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಹೇಳಿದರು. ಮಕ್ಕಳ ಸಹಾಯವಾಣಿ ಕೇಂದ್ರ ಸಂಯೋಜಕ ದೀಕ್ಷಿತ್, ಮಕ್ಕಳ ರಕ್ಷಣಾ ಘಟಕಾಧಿಕಾರಿ ಯಶೋದಾ, ಎಸಿಡಿಪಿಒ ಗಾಯತ್ರಿ ಕಂಬಳಿ, ಮೆಸ್ಕಾಂ ಅಧಿಕಾರಿ ರಂಗಸ್ವಾಮಿ ಮಕ್ಕಳ ಸಮಸ್ಯೆ ಕುರಿತು ಮಾತನಾಡಿದರು. ಕಾರ್ಮಿಕ ಅದಾಲತ್! ಕಾರ್ಮಿಕ ಸೇವಾ ಕಾರ್ಯ, ಸೌಲಭ್ಯ ಮತ್ತಿತರ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡುವ ಹಿನ್ನೆಲೆಯಲ್ಲಿ ಪಂಚಾಯತಿ ಮಟ್ಟದಲ್ಲಿ ಕಾರ್ಮಿಕ ಅದಾಲತ್ ನಡೆಸುವುದಾಗಿ ಗ್ರಾಪಂ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಪ್ರತಿಕ್ರಿಯಿಸಿದರು.
ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ ಬೋಳಂತೂರು, ಗ್ರಾ.ಪಂ. ಸದಸ್ಯರಾದ ಜಿನರಾಜ ಆರಿಗ, ಚಂದ್ರಶೇಖರ ಕರ್ಣ, ಆನಂದ ಮಧ್ವ, ಯೂಸ್ ಬಾಂಬಿಲ, ದಾಮೋದರ್, ಕಾವಳಮೂಡೂರು ಗ್ರಾ.ಪಂ. ಸದಸ್ಯ ಇಸ್ಮಾಯಿಲ್ ಸಿದ್ದೀಕ್ ಉಪಸ್ಥಿತರಿದ್ದರು. ಪಡಿ ಸಂಯೋಜಕಿ ರಾಜೇಶ್ವರಿ ಸ್ವಾಗತಿಸಿ, ಪಿಡಿಓ ವೇದವ ವಂದಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಫಾರೂಕ್ ಬಂಟ್ವಾಳ ಮಕ್ಕಳ, ಪಡಿ ಸಂಯೋಜಕಿ ಸಮಿತಾ ಶೆಟ್ಟಿ ಸಂವಾದ ನಡೆಸಿಕೊಟ್ಟರು. ಕೇಂದ್ರದ ಸದಸ್ಯರಾದ ಶಾರದ ಕಾವಳಕಟ್ಟೆ, ಪಿ.ಎಚ್. ಉಸ್ಮಾನ್, ಎಂಎಸ್ ಡಬ್ಲ್ಯೂ ವಿದ್ಯಾರ್ಥಿಗಳಾದ ದೀಕ್ಷಿತಾ, ಜಯಂತಿ, ಸ್ವಾತಿ ಸಹಕರಿಸಿದರು.

