ಬಂಟ್ವಾಳ: ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಅಂತ್ಯಕ್ರಿಯೆ ಅ.14 ಸೋಮವಾರ ಸಂಜೆ 4 ,ಗಂಟೆಗೆ ಅವರ ಹುಟ್ಟೂರಾದ ಸಜೀಪ ಮೂಡ ಗ್ರಾಮದ ಮಿತ್ತಕೆರೆ ಎಂಬಲ್ಲಿ ಪೋಲೀಸ್ ಗೌರವಗಳೊಂದಿಗೆ ನಡೆಯಲಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ತಿಳಿಸಿದ್ದಾರೆ. ಗೋಪಾಲನಾಥ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಲ್ಲದೆ ಸರಕಾರಿ ಗೌರವದೊಂದಿಗೆ ಸಕಲವಿಧಿವಿಧಾನಗಳು ನಡೆದ ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ ಅದಕ್ಕೆ ಬೇಕಾದ ಸಕಲ ವ್ಯವಸ್ಥೆ ಗಳನ್ನು ಮಾಡುವಂತೆ ತಹಶೀಲ್ದಾರ್ ಅವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಸೂಚಿಸಿದ್ದಾರೆ.
ಗೋಪಾಲನಾಥನ್ ಅವರ ಹುಟ್ಟೂರು ಸಜೀಪ ಮಿತ್ತಕೆರೆಗೆ ಭೇಟಿ ನೀಡಿ ಅಂತ್ಯಕ್ರಿಯೆ ನಡೆಯುವ ಸ್ಥಳ ಹಾಗೂ ಪೋಲೀಸ್ ಗೌರವ ನೀಡಲು ಬೇಕಾದ ಎಲ್ಲಾ ವ್ಯವಸ್ಥೆ ಗಳನ್ನು ತಹಶೀಲ್ದಾರ್ ರಶ್ಮಿ ಅವರು ಪರಿಶೀಲನೆ ಮಾಡಿದ್ದಾರೆ.
ಅದಕ್ಕೆ ಮೊದಲು ಗೋಪಾಲನಾಥ್ ಅವರ ಮೃತ ಪಾರ್ಥಿವ ಶರೀರದ ಯಾತ್ರೆ ಸೋಮವಾರ ಬೆಳಿಗ್ಗೆ 9ಕ್ಕೆ ಪದವಿನಂಗಡಿ ದೇವಿಕಟ್ಟೆಯಿಂದ ಹೊರಟು ಮಂಗಳೂರು ಪುರಭವನ ತಲುಪಲಿದೆ. ಪುರಭವನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 2 ಗಂಟೆವರಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

