ಕೈಕಂಬ : ತೊದಲು ನುಡಿಯಲ್ಲೇ `ವಿಜೆ’ಯಂತಹ ಮಾತುಗಾರಿಕೆಯೊಂದಿಗೆ ಮನೆಮಂದಿಯ ಗಮನಸೆಳೆದಿದ್ದ ಈ ಬಾಲಕಿ ಈಗ ಪುಟಾಣಿ `ವಿಜೆ’ಯಾಗಿ ಎಲ್ಲೆಡೆ ಹೆಸರುವಾಸಿಯಾಗಿದ್ದಾಳೆ. ಈಕೆ ಬೇರೆ ಯಾರೂ ಅಲ್ಲ, `ಕರ್ನಾಟಕ ಸೌರಭ ರತ್ನ’ ರಾಜ್ಯ ಪ್ರಶಸ್ತಿ ಸ್ವೀಕರಿಸುತ್ತಿರುವ ತೀರ್ಥಾ ಪೊಳಲಿ. ಈಕೆ ಪೊನ್ನೆಲ ಕೃಷ್ಣ-ಪ್ರೇಮಾ ದಂಪತಿಯ ಮುದ್ದಿನ ಪುತ್ರಿ. ಸದ್ಯ ಗಂಜಿಮಠದ ರಾಜ್ ಅಕಾಡೆಮಿಯಲ್ಲಿ ಐದನೇ ತರಗತಿಯ ವಿದ್ಯಾರ್ಥಿನಿ. ಇವಳ ತಂದೆ ತಾಯಿಯ ಪ್ರೋತ್ಸಾಹದೊಂದಿಗೆ ಪೊಳಲಿಯ ಶ್ರೀ ರಾಜರಾಜೇಶ್ವರೀ ದೇವಿಯ ಅನುಗ್ರಹದಿಂದ ತೀರ್ಥಾಳ ಮಾತುಗಾರಿಕೆಗೆ ಮರುಳಾಗದ ಪ್ರೇಕ್ಷಕರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜನಪ್ರಿಯಳಾಗಿದ್ದಾಳೆ. ವಾಕ್ ಚಾತುರ್ಯ ಈಕೆಯ ಸಾಧನೆ ಮತ್ತಷ್ಟು ಎತ್ತರಕ್ಕೆ ಏರಿಸಿದೆ. ಜೊತೆಗೆ ಕಲಾವಂತಿಕೆಯನ್ನೂ ಮೈಗೂಡಿಸಿಕೊಂಡಿದ್ದಾಳೆ. ವರ್ತಮಾನದ ಸನ್ನಿವೇಶಗಳೊಂದಿಗೆ ಕಾರ್ಯಕ್ರಮ ನಿರೂಪಿಸುವ ಈಕೆಯ ಮುದ್ದಿನ ಮಾತು ಕೇಳುವುದೇ ಒಂದು ಸುಂದರ ಸನ್ನಿವೇಶವಾಗಿದೆ. ಬಹುಮುಖ ಪ್ರತಿಭೆಯ ಈಕೆ ಕಾರ್ಯಕ್ರಮ ನಿರೂಪಣೆ ಜೊತೆಗೆ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾಳೆ.
ಅಭಿಮತ ವಾಹಿನಿಯಲ್ಲಿ ಈಕೆ `ವೀಕೆಂಡ್ ವಿಥ್ ಮಿ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಳೆ. ಸ್ಥಳೀಯವಾಗಿ ಬಹಳಷ್ಟು ಕಾರ್ಯಕ್ರಮಗಳಲ್ಲಿ ವೇದಿಕೆ ಏರಿರುವ ಈಕೆ ಮುಂಬೈಯಲ್ಲೂ ತನ್ನ ನಿರೂಪಣಾ ಛಾಪು ಬೀರಿದ್ದು, ಅಲ್ಲೂ ಮೆಚ್ಚುಗೆ ಗಳಿಸಿದ್ದಾಳೆ.
ಬಾಲ ಕಲಾವಿದೆಯಾಗಿ `ಪನೋಡಾ ಬೊಡ್ಚಾ’ ತುಳು ಚಿತ್ರದಲ್ಲಿ ನಟಿಸಿ, ಅಭಿನಯ ಚಾತುರ್ಯ ಮೆರೆದಿದ್ದಾಳೆ. ಈಗ ಚಿತ್ರೀಕರಣ ಹಂತದಲ್ಲಿರುವ `ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಂಬರ್’ ಚಿತ್ರದಲ್ಲೂ ನಟಿಸುತ್ತಿದ್ದಾಳೆ. ಈಕೆಯ ಸಾಧನೆ ಗುರುತಿಸಿ ಹಲವು ಸಂಘ-ಸಂಸ್ಥೆಗಳು ಸನ್ಮಾನಿ, ಬಿರುದು ನೀಡಿವೆ. ತುಳುವ ಕುವರಿ ಬಿರುದಾಂಕಿತ ಈಕೆಗೆ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ. ಬಾಲ ಕಲಾವಿದೆ ತೀರ್ಥಾ ಪೊಳಲಿ ತನ್ನ ಬಹುಮುಖ ಸಾಧನೆಯೊಂದಿಗೆ ಉತ್ತುಂಗ ಶಿಖರವೇರಲಿ.ಎಂದು ಹಾರೈಕೆ ಇದೀಗ ಕಿನ್ನಿಗೋಳಿ ಯುಪುರುಷ ಸಭಾಂಗಣದಲ್ಲಿ ಸೌರಭ ರತ್ನ ರಾಜ್ಯ ಪ್ರಶಸ್ತಿಯನ್ನು ಕ.ಸಾ.ಪ.ಕೇಂದ್ರ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಧಾನ ಮಾಡಲಿದ್ದಾರೆ.

