ಬಂಟ್ವಾಳ: ತಾಯಿ ಮಡಿಲಿನಿಂದ ಮಗು ಶಾಲಾ ತರಗತಿಗೆ ಪರಿಕಲ್ಪನೆಯಡಿ ಶಾಲಾ ಆರಂಭೋತ್ಸವ ಕಾರ್ಯಕ್ರಮ ಬುಧವಾರ ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಒಂದನೇ ತರಗತಿಗೆ ಸೇರಿದ 125 ವಿದ್ಯಾರ್ಥಿಗಳು ಸಹಿತ ಪ್ರಾಥಮಿಕ ಪೂರ್ವ ಹಾಗೂ ಇತರ ತರಗತಿಗಳಿಗೆ ಸೇರಿದ ಒಟ್ಟು 270 ಮಂದಿ ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿಕೊಳ್ಳಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್ ಹೊಸ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನು ನೀಡಿ ಶಾಲೆಗೆ ಬರ ಮಾಡಿಕೊಂಡರು. ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಯವರುವ ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು ಪ್ರಕಾಶ್ ಅಂಚನ್ ಅವರ ನೇತೃತ್ವದಲ್ಲಿ ಉಳಿಸುವ ಪ್ರಯತ್ನ ನಡೆದಿದೆ. ಇಂದು ಈ ಶಾಲೆಯಲ್ಲಿ ಏಳ್ನೂರು ಮಂದಿ ವಿದ್ಯಾರ್ಥಿಗಳಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂದು ವಿಶಿಷ್ಠ ಸಾಧನೆಯಾಗಿದ್ದು ಅಭಿನಂದನೀಯ ಎಂದರು. ಪುಸ್ತಕ ಪಡೆಯಲು ಮಕ್ಕಳು ಬೀದಿಯಲ್ಲಿ ನಿಂತು ಹೋರಾಟ ಮಾಡಿದ ಕಾಲವೊಂದಿತ್ತು ಆದರೆ ಇಂದು ಆಂಗ್ಲ ಮಾಧ್ಯಮ ಕಲಿಕೆ ಸರಕಾರವೇ ಅವಕಾಶ ನೀಡಿದ್ದು ದಡ್ಡಲಕಾಡು ಶಾಲೆಗೂ ಅನುಮತಿ ಸಿಕ್ಕಿರುವುದು ಸಂತೋಷ ನೀಡಿದೆ ಎಂದ ಅವರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲೆ ಮಂಜೂರುಗೊಳಿಸುವ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿದರು

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್ ಮಾತನಾಡಿ ನಿರಂತರ ಹೋರಾಟ ಹಾಗೂ ಶ್ರಮದ ಫಲವಾಗಿ ಈ ಶಾಲೆ ಈ ಎತ್ತರಕ್ಕೆ ಬೆಳೆದು ನಿಂತಿದೆ. 30 ಮಕ್ಕಳಿದ್ದ ಶಾಲೆಯಲ್ಲಿ ಮೂರು ವರ್ಷದ ಅವಧಿಯಲ್ಲಿ 700 ಮಕ್ಕಳಿಗೆ ಏರಿಕೆಯಾಗಬೇಕಾದರೆ ಅದರ ಹಿಂದಿರುವ ಪರಿಶ್ರಮವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು. ಎಲ್ಲಾ ಅವಕಾಶ ಹಾಗೂ ಸೌಲಭ್ಯಗಳು ಈ ಶಾಲೆಯಲ್ಲಿದ್ದು ಅದನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ, ಶಾಲಾ ದತ್ತು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಅಂಚನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಪಂಜಿಕಲ್ಲು ಗ್ರಾ.ಪಂ.ಸದಸ್ಯರಾದ ಪೂವಪ್ಪ ಮೆಂಡನ್, ರೂಪಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ ಸ್ವಾಗತಿಸಿದರು, ಸಹ ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಳ ಪಾಲಕರಿಗೆ ಪೂರಕ ಮಾಹಿತಿ ನೀಡಿದರು. ಪುರುಷೋತ್ತಮ ಅಂಚನ್, ನವೀನ್ ಸೇಸಗುರಿ, ಬಾಲಕೃಷ್ಣ ಜಿ., ಅಶ್ವತ್ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಶಾಸಕ ರಾಜೇಶ್ ನಾೈಕ್ ಶಾಲಾ ಹೊಸ ಬಸ್ಸಿಗೆ ಚಾಲನೆ ನೀಡಿ, ಕೀಲಿ ಕೈಯನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಅವರ ಜಿಲ್ಲಾ ಪಂಚಾಯತಿ ಅನುದಾನದಡಿ ಮಂಜೂರುಗೊಂಡ ಪೀಠೋಪಕರಣಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಬಂಟ್ವಾಳದ ಅಂಬಿಕಾ ಮೆಟಲ್ನವರು ಉಚಿತವಾಗಿ ಕೊಡಮಾಡಿದ ಸ್ಟೀಲ್ ಬಟ್ಟಲನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಶಾಲೆ ಶೃಂಗಾರ:
ಆರಂಭೋತ್ಸವದ ಹಿನ್ನಲೆಯಲ್ಲಿ ಶಾಲೆಯನ್ನು ತಳಿರು ತೋರಣ ಹಾಗೂ ಬಂಟಿಂಗ್ಸ್ಗಳಿಂದ ಸಿಂಗರಿಸಲಾಗಿತ್ತು. ಹೊಸ ವಿದ್ಯಾರ್ಥಿಗಳನ್ನು ಶಾಲಾ ಅಂಗಣದಿಂದ ವಾದ್ಯ ಹಾಗೂ ಬ್ಯಾಂಡ್ಗಳ ಮೂಲಕ ಮರೆವಣಿಗೆಯಲ್ಲಿ ಕರೆ ತರಲಾಯಿತು.
ಈ ವರ್ಷ ಒಂದನೇ ತರಗತಿಗೆ 125 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಎಲ್ಕೆಜಿ, ಯೂಕೆಜಿ ಸೇರಿ ಒಟ್ಟು 270 ಮಂದಿ ಹೊಸ ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಂಡಿದ್ದು ವಿದ್ಯಾರ್ಥಿಳ ಒಟ್ಟು ಸಂಖ್ಯೆ ಏಳ್ನೂರು ಗಡಿ ದಾಟಿದೆ. ಮಕ್ಕಳ ದಾಖಲಾತಿಯಲ್ಲಿ ಏರಿಕೆಯಾಗಿರುವುದರಿಂದ ಒಂದನೇ ತರಗತಿಗೆ ಎ, ಬಿ, ಸಿ ಎನ್ನುವ ಮೂರು ವಿಭಾಗಗಳನ್ನು ತೆರೆಯಲಾಗಿದೆ.
