ಬಂಟ್ವಾಳ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮತ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ನಗರ ಪೊಲೀಸರು ಬುಧವಾರ ಬಂಧಿಸಿ ,ಸುಮಾರು 150 ಮೂಟೆಗಳಲ್ಲಿ ತುಂಬಿಸಿಡಲಾದ ಒಟ್ಟು 5470 ಕೆ.ಜಿ. (54 ಕ್ವಿಂಟಲ್ ) ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಎಎಸ್ಪಿ ಸೈದುಲ್ ಅಡಾವತ್ ನೇತೃತ್ವದ ಪೊಲೀಸ್ ತಂಡ ದಾಳಿ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭ ಗೂಡಿನಬಳಿ ಎಂಬಲ್ಲಿ ದಾಸ್ತಾನಿರಿಸಲಾಗಿರುವ ಮತ್ತು ಸಾಗಾಟಕ್ಕೆ ಪಿಕ್ ಅಪ್ ನಲ್ಲಿ ತುಂಬಿಸಲಾದ ಅಕ್ಕಿ ಮೂಟೆಗಳು ಕಂಡುಬಂದಿದ್ದು, ಈ ಸಂಬಂಧ ಅಬ್ದುಲ್ ಹಕೀಂ ಮತ್ತು ಅಬ್ದುಲ್ ಸಲಾಂ ಎಂಬವರನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದಾಗ
. ಜನರಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಪಡೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕೇರಳಕ್ಕೆ ಸಾಗಾಟಮಾಡುತ್ತಿ ರುವುದು ಬೆಳಕಿಗೆ ಬಂದಿದೆ. ತಕ್ಷಣ ಆರೋಪಿಗಳನ್ನು ಬಂಧಿಸಿ ವಾಹನದಲ್ಲಿದ್ದ 50 ಕೆ.ಜಿ. ತೂಕದ 60 ಚೀಲಗಳು, ಅಂಗಡಿಯಲ್ಲಿದ್ದ ತಲಾ 50 ಕೆ.ಜಿ. ತೂಕದ 27 ಬ್ಯಾಗುಗಳು, 40 ಕೆ.ಜಿ. ತೂಕದ 28 ಚೀಲಗಳ ಅಕ್ಕಿಯನ್ನು ತೂಗುಯಂತ್ರ, 2 ಹೊಲಿಗೆ ಯಂತ್ರ, ಪಿಕಪ್ ವಾಹನವನ್ನು ಸ್ವಾಧೀನಪಡಿಸಿಕೊಂಡು ಮುಂದಿನ ತನಿಖೆಗೆ ನಗರ ಪೊಲೀಸರಿಗೆ ಒಪ್ಪಿಸಿದರು.
ಈ ಕುರಿತು ಬಂಟ್ವಾಳ ತಾಲೂಕು ಆಹಾರ ನಿರೀಕ್ಷಕರು ನೀಡಿದ ದೂರಿನನ್ವಯ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ 3, 7 ಕರ್ನಾಟಕ ಅವಶ್ಯಕ ವಸ್ತುಗಳ ಕಾಯ್ದೆ 1955, ಹಾಗೂ 4, 5 ಕರ್ನಾಟಕ ಅಗತ್ಯ ವಸ್ತುಗಳ ದರ ಮತ್ತುದಾಸ್ತನು ನಿರ್ವಹಣಾ ಆದೇಶ 1981 ನಿಯಮ ಮತ್ತು 18 ಕರ್ನಾಟಕ ಅವಶ್ಯಕ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ ನಿಯಂತ್ರಣ ಆದೇಶ 2016ರಂತೆ ನಿಯಮ ಉಲಂಘನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


