ಬಂಟ್ವಾಳ : ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಸಾರ್ವಜನಿಕ ಆಟದ ಮೈದಾನಕ್ಕೆ ಮೀಸಲಿಟ್ಟ 1 ಎಕರೆ ಜಮೀನಿನಲ್ಲಿ ಮೈಸಂದಾಯ ಕೊಡಮಣಿತ್ತಾಯಿ ಧೂಮಾವತಿ ದೈವದ ಹೆಸರಿನಲ್ಲಿ ಅತಿಕ್ರಮಣಗೊಳಿಸಿ ಆವರಣ ಗೋಡೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ.
ರಾಯಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಇರುವ ಈ ಒಂದು ಎಕರೆ ಸರ್ಕಾರಿ (ಪÀರಂಬೋಕು) ಜಮೀನು ಆಟದ ಮೈದಾನಕ್ಕಾಗಿ ಮೀಸಲಿಟ್ಟು, ಗ್ರಾಮ ಪಂಚಾಯಿತಿ ಈಗಾಗಲೇ ನಿರ್ಣಯ ಕೈಗೊಂಡಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಹೆಸರಿನಲ್ಲಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣೆ ಎಸೈ ಪ್ರಸನ್ನ ಎಂ.ನೇತೃತ್ವದ ಪೊಲೀಸರು ಬಂದು ಪರಿಶೀಲಿಸಿದರು. ಈ ಬಗ್ಗೆ ತಹಶೀಲ್ದಾರರ ಮೂಲಕ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲಿನ ಮೀಸಲಿಟ್ಟ ಜಮೀನು ಪುನರ್ ಸರ್ವೆ ನಡೆಸಿದ ಬಳಿಕವೇ ಕಾಮಗಾರಿ ನಡೆಸುವಂತೆ ಸೂಚಿಸಿದರು. ಇಲ್ಲಿನ ಸರ್ವೆ ನಂ. 86/1ಪಿ1ರಲ್ಲಿ ಒಟ್ಟು 3.84 ಎಕರೆ ಜಮೀನಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿ, ಹಾಲು ಉತ್ಪಾದಕರ ಸಹಕಾರಿ ಸಂಘ, ಪಶು ವೈದ್ಯಕೀಯ ಕೇಂದ್ರ ಅಂಚೆ ಕಚೇರಿ ಮತ್ತಿತರ ಕಟ್ಟಡ ನಿರ್ಮಾಣಗೊಂಡಿದೆ. ಉಳಿದಂತೆ ಇಲ್ಲಿನ ಉಳಿಕೆ ಒಂದು ಎಕರೆ ಜಮೀನಿನ ಗೋಳಿದಡಿ ಪ್ರತೀವರ್ಷ ದೊಂಪದಬಲಿ ಉತ್ಸವ ನಡೆಸಲಾಗುತ್ತಿದೆ. ಈ ಬಗ್ಗೆ ದೈವಸ್ಥಾನ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಸಹಾಯಕ ಆಯುಕ್ತರು ಈಗಾಗಲೇ ಜಮೀನು ಮೀಸಲಿಟ್ಟಿದ್ದಾರೆ. ಇಲ್ಲಿನ ದೈವದ ನುಡಿಯಂತೆ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಆವರಣಗೋಡೆ ನಿರ್ಮಿಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಕೆ.ರಮೇಶ ನಾಯಕ್ ತಿಳಿಸಿದ್ದಾರೆ.

