ಉಡುಪಿ: ಕೇಂದ್ರ ಸರಕಾರ ರೈತರ ಖಾತೆಗೆ 2,000 ರೂ. ಜಮೆ ಮಾಡಲು ಅನುಮತಿ ನೀಡಿದ ಚುನಾವಣಾ ಆಯೋಗ ರಾಜ್ಯದ ರೈತರ ಸಾಲ ಮನ್ನಾ ಹಣ ಬಿಡುಗಡೆಗೆ ಮಾತ್ರ ತಡೆಯೊಡ್ಡಿ ದ್ವಿಮುಖ ನೀತಿ ಅನುಸರಿಸಿದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರು ಉಡುಪಿ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರಕಾರ ಬಜೆಟ್‍ನಲ್ಲಿ ಮಂಡಿಸಿದ ಕೃಷಿ ಸಮ್ಮಾನ್ ಯೋಜನೆ ಪೂರ್ವಾನ್ವಯಗೊಳಿಸಿ ಜಾರಿಗೊಳಿಸಬಹುದಾದರೆ ರಾಜ್ಯದ ಬಜೆಟ್ ಯೋಜನೆ ಅನುಷ್ಠಾನಕ್ಕೆ ಅಡ್ಡಿ ಸರಿಯೇ ಎಂದು ಪ್ರಶ್ನಿಸಿದರು.ಕೇಂದ್ರ ಸರಕಾರ ಮುಂದಿನ ಆರು ತಿಂಗಳಿಗಾಗಿ ಭಾರೀ ಸಾಲ ಎತ್ತಿ ಯುಪಿಎ ಅವಧಿಯಲ್ಲಿದ್ದ ಆರ್ಥಿಕ ಶಿಸ್ತನ್ನೇ ಹಾಳುಗೆಡವಿದೆ. ಮೋದಿ ಆಡಳಿತದಲ್ಲಿ ಕೋಟ್ಯಂತರ ಯುವಕರು ಬೀದಿ ಪಾಲಾಗಿದ್ದಾರೆ. ಪ್ರಧಾನಿ ಮೋದಿ ತಾವೊಬ್ಬರೇ ದೇಶ ರಕ್ಷಕನೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಈ ಹಿಂದಿನ ಆಡಳಿತಗಳ ಕೊಡುಗೆಯನ್ನು ಮರೆಮಾಚುತ್ತಿದ್ದಾರೆ. ದೇಶ ರಕ್ಷಣೆಯಲ್ಲಿ ಯೋಧರಿಗಿಂತ ಹೆಚ್ಚಿನ ಶ್ರಮ ಮೋದಿ ವಹಿಸಿದ್ದಾರೆಯೇ ಎಂದು ಎಚ್‍ಡಿಕೆ ಪ್ರಶ್ನಿಸಿದರು.
IMG-20190407-WA0019
ಮೈತ್ರಿ ಸರಕಾರದ ಅವಧಿಯಲ್ಲಿ ಅಮಾಯಕರ ಮೇಲಿನ ಹಲ್ಲೆ ಪ್ರಕರಣಕ್ಕೆ ತಡೆ ಬಿದ್ದಿದೆ. ಪ್ರತಿ ಸಮಾಜಕ್ಕೂ ರಕ್ಷಣೆ ಒದಗಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಮಾಜಿ ಸಂಸದ ಮಾದೇ ಗೌಡ ಅವರನ್ನು ದೃಶ್ಯ ಮಾಧ್ಯಮ ವಿನಾಕಾರಣ ಕುಟುಕು ಕಾರ್ಯಾಚರಣೆ ಮೂಲಕ ಬ್ರೇಕಿಂಗ್ ನ್ಯೂಸ್‍ನಲ್ಲಿ ಸಿಲುಕಿಸಿದೆ. ಅಂತಹ ದೊಡ್ಡ ತಪ್ಪು ಅವರೇನು ಮಾಡಿದ್ದಾರೆ? ಚುನಾವಣೆಗೆ ವೆಚ್ಚವಾಗೋದು ಸಹಜ. ರಾಜಕಾರಣಿಗಳ ಬಗೆಗಿರುವ ವಿಶ್ವಾಸಾರ್ಹತೆಯ ಚರ್ಚೆ ಈಗ ದೃಶ್ಯ ಮಾಧ್ಯಮಗಳ ಬಗೆಗೂ ನಡೀತಿದೆ. ಒಂಬತ್ತೂವರೆ ತಿಂಗಳ ಆಡಳಿತದಲ್ಲಿ ಒಂದು ದಿನ (ಬಿಜೆಪಿ ಮತ್ತು ಮಾಧ್ಯಮಗಳಿಂದಾಗಿ) ನೆಮ್ಮದಿ ಇಲ್ಲದಿದ್ದರೂ ಉತ್ತಮ ಆಡಳಿತ ನೀಡಿದ್ದೇನೆ ಎಂದರು. ಕರಾವಳಿಯ ಯುವಕರನ್ನು ಧರ್ಮದ ಹೆಸರಲ್ಲಿ ದಾರಿ ತಪ್ಪಿಸುವವರಿದ್ದು ಅವರಿಗೆ ಬಲಿಯಾಗಬೇಡಿ. ಮೋದಿ ಆಡಳಿತದಲ್ಲಿ ನೋಟು ಅಮಾನ್ಯೀಕರಣದಿಂದ ಒಳಿತಾಗಿದೆಯಾ? ಕಪ್ಪು ಹಣ ಓಡಾಡುತ್ತಲೇ ಇದೆ ಎಂದು ಸಿಎಂ ತಿಳಿಸಿದರು. ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ 40ರಿಂದ 50 ಕೋಟಿ ರೂ. ಆಮಿಷವೊಡ್ಡಲು ಅಷ್ಟೊಂದು ಹಣ ಎಲ್ಲಿಂದ ಬಂತು? ಅದು ಕಪ್ಪು ಹಣವೋ, ಬಿಳಿಯೋ? ಕೇಂದ್ರ ಸರಕಾರ ಕೊಟ್ಟ ಉಜ್ವಲ ಗ್ಯಾಸ್ ಸಿಲಿಂಡರ್ ತುಂಬಲು ಹಣವಿಲ್ಲದಾಗಿದೆ (ಬೆಲೆಯೇರಿಕೆ) ವಿಜಯ ಬ್ಯಾಂಕ್ ಮುಚ್ಚುಗಡೆಯಾಗಿದೆ. ಮೋದಿ ಮುಖ ನೋಡಿ ವೋಟು ಕೊಡಿ ಎನ್ನುತ್ತಿರುವ ಸಂಸದರಾದ ನಳಿನ್, ಶೋಭಾ ಸಾಧನೆಯಿಲ್ಲದೆ ಮುಖ ಮುಚ್ಚಿಕೊಂಡಿದ್ದಾರೆ. ಮೈತ್ರಿ ಸರಕಾರ ಐದು ವರ್ಷ ಸುಭದ್ರವಾಗಿರಲಿದೆ ಎಂದರು.

 

By suddi9

Leave a Reply

Your email address will not be published. Required fields are marked *