ಸುದ್ದಿ9:ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ವತಿಯಿಂದ ಸುವರ್ಣ ಕನರ್ಾಟಕ ಸಂಭ್ರಮದ ವೇಳೆಗೆ ಆರಂಭ ಕಂಡಿದ್ದ ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ನೂರನೇ ಕೃತಿಯ ಲೋಕಾರ್ಪಣೆ, ಹಾಗೂ ಇತರೆ ಕೃತಿಗಳ ಲೊಕಾರ್ಪಣೆಯ ಸಂಭ್ರಮ ‘ಪುಸ್ತಕೋತ್ಸವ’ ರವಿವಾರ ಕನ್ನಡ ಸಂಘದ ಕನ್ನಡ ಭವನದಲ್ಲಿ ಜರಗಿತು. ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ 87ರಿಂದ 100ರ ತನಕದ ಹದಿನಾಲ್ಕು ಕೃತಿಗಳ ಲೊಕಾರ್ಪಣೆಯನ್ನು ನೆರವೇರಿಸಿದ ಮಣಿಪಾಲದ ಪ್ರಸಿದ್ಧ ಎಲುಬು ರೋಗ ತಜ್ಞ ಡಾ. ಭಾಸ್ಕರಾನಂದ ಕುಮಾರ್ ಕಾಂತಾವರ ಕನ್ನಡ ಸಂಘದ ಸಾಹಿತ್ಯ ಸೇವೆ ಮತ್ತು ಸಾಧಕರನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಭಾರತೀಯ ಸಂಸ್ಕೃತಿ, ಸಾಹಿತ್ಯದ ಒಲವು ಮೂಡಿಸುತ್ತಿದ್ದ ಅವಿಭಕ್ತ ಕುಟುಂಬದ ವಾತಾವರಣವನ್ನು ನಾವಿಂದು ಕಳೆದುಕೊಂಡಿದ್ದೇವೆ. ಇಂತಹ ಆತಂಕಗಳ ನಡುವೆಯೂ ಕಾಂತಾವರ ರಾಜ್ಯದಲ್ಲಿ ತನ್ನ ಅನನ್ಯ ಸಾಹಿತ್ಯ ಸೇವೆ ಮತ್ತು ಸಾಧನೆಗಳಿಂದ ಪಯರ್ಾಯ ಸಾಂಸ್ಕೃತಿಕ ರಾಜಧಾನಿಯಾಗಿ ಬೆಳೆಯುತ್ತಿದೆ ಎಂದು ಮಂಗಳೂರಿನ ಖ್ಯಾತ ಶಸ್ತ್ರ ಚಿಕಿತ್ಸಕ ಡಾ.ಸಿ.ಆರ್. ಬಲ್ಲಾಳ್ ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಗ್ರಂಥಮಾಲೆಯ 101 ಕೃತಿ ಮತ್ತು ಕೃತಿಕಾರರ ಕಿರು ಪರಿಚಯದ ಕೃತಿ-‘ನಾಡಿಗೆ ನಮಸ್ಕಾರಕ್ಕೆ ನೂರ ಒಂದು ನಮಸ್ಕಾರ’, ಸಂಘದ 2012ರ ಸಾಲಿನ ‘ನುಡಿನಮನ’ದ ಉಪನ್ಯಾಸ ಸಂಪುಟ -‘ನುಡಿಹಾರ 5’, ಮೊಗಸಾಲೆ ಪ್ರಕಾಶನದ ಪ್ರಕಟಣೆಯಾಗಿ ಮಣಿಪಾಲ ವೀಣಾ ಕುಮಾರಿ ಅವರ ಅಧ್ಯಯನ ಕೃತಿ’ಸಾರ್ವಭೌಮ ವೀಣಾವಿಜ್ಞಾನ’ವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಾಡಿಗೆ ನಮಸ್ಕಾರ ಗ್ರಂಥ ಮಾಲೆಯಡಿ ಇಂದು ಲೋಕಾರ್ಪಣೆಗೊಂಡ ಕೃತಿಗಳ ಪ್ರೊತ್ಸಾಹಕರು, ಸಾಧಕರು ಹಾಗೂ ಲೇಖಕರನ್ನು ಗೌರವಿಸಲಾಯಿತು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಸಂಘದ ಕಾಯರ್ಾಧ್ಯಕ್ಷ ಡಾ. ನಾ.ಮೊಗಸಾಲೆ ಬುದ್ಧಿ, ಭಾವಗಳನ್ನು ಕಾಪಿಡುವುದೇ ಗ್ರಂಥ ಮಾಲೆಯ ಉದ್ದೇಶ ಮತ್ತು ಸಂದೇಶ ಎಂದರು.
ಕನ್ನಡ ಸಂಘದ ಪ್ರಧಾನ ಕಾರ್ಯದಶರ್ಿ ಸದಾನಂದ ನಾರಾವಿ ಸ್ವಾಗತಿಸಿದರು. ಉಪಾಧ್ಯಕ್ಷ ವಿಠ್ಠಲ ಬೇಲಾಡಿ ಹಾಗೂ ಸರೋಜಿನಿ ಕಾಂತಾವರ ಕಾರ್ಯಕ್ರಮ ನಿರ್ವಹಿಸಿದರು. ನಾಡಿಗೆ ನಮಸ್ಕಾರ ಗ್ರಂಥ ಮಾಲಿಕೆಯ ಸಂಪಾದಕ ವಿ.ಗ.ನಾಯಕ, ನುಡಿಹಾರ ಸಂಪಾದಕ ಎಸ್. ಆರ್.ಅರುಣ ಕುಮಾರ್ ಮೊಗಸಾಲೆ ಪ್ರಕಾಶನದ ನಿರಂಜನ ಮೊಗಸಾಲೆ ಉಪಸ್ಥಿತರಿದ್ದರು.
ಅಪರಾಹ್ನ ಅರುಣಾ ಕುಮಾರಿ ಮಣಿಪಾಲ ಅವರಿಂದ ವೀಣಾವಾದನ, ಬಳಿಕ ನುಡಿನಮನ – 81 ತಿಂಗಳ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮವಾಗಿ ಡಾ. ಶುಭಾ ಮರವಂತೆ ಅವರಿಂದ ಮರು ಓದುವ ಕಾದಂಬರಿ ಪ್ರೊ. ಶಂಕರ್ ಮೊಕಾಶಿ ಪುಣೇಕರ್ ಅವರ ‘ಗಂಗವ್ವ ಗಂಗಾಮಾಯಿ’ ಕುರಿತು ಉಪನ್ಯಾಸ ನಡೆಯಿತು.
ಬಾರದ ತೇರು… ಪುಸ್ತಕ ನೂರು.
ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಆರಂಭದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ನಾ. ಮೊಗಸಾಲೆ ಕನ್ನಡ ನಾಡು ಸುವರ್ಣ ಸಂಭ್ರಮದಲ್ಲಿದ್ದಾಗ ಕನ್ನಡ ಸಂಘಕ್ಕೂ ಮೂವತ್ತು ತುಂಬಿತ್ತು. ಹಾಗಾಗಿ ಜಿಲ್ಲೆಯ ಕನಿಷ್ಠ 30 ಸಾಧಕರನ್ನು ಪುಸ್ತಕಗಳ ರೂಪದಲ್ಲಿ ನಾಡಿಗೆ ನಮಸ್ಕಾರ ರೂಪದಲ್ಲಿ ಹೊರತರುವ ಸಂಕಲ್ಪ ಮಾಡಲಾಗಿತ್ತು ಎಂದರು. ಕನರ್ಾಟಕದ ಸುವರ್ಣ ತೇರು ಕನ್ನಡ ಸಾಹಿತ್ಯ ಚಟುವಟಿಕೆ ಮತ್ತು ಸೇವೆಯಲ್ಲಿ ನಂದಾದೀಪದಂತೆ ಇಂದಿಗೂ ಮಾದರಿಯಾಗಿ ಕೆಲಸ ಮಾಡುತ್ತಿರುವ ಕನ್ನಡ ಸಂಘ ಮತ್ತು ಕಾಂತಾವರಕ್ಕೆ ಬಾರದೇ ಸಕರ್ಾರವೂ ನಮ್ಮನ್ನು ಅವಮಾನಿಸಿತ್ತು ಎಂದ ಮೊಗಸಾಲೆ ಅದರ ಬೇಸರವೇ ನಾಡಿಗೆ ನಮಸ್ಕಾರ ಮಾಲಿಕೆಯ ಹುಟ್ಟಿಗೆ ಕಾರಣವಾಗಿ ಇಂದು ಶತಕದ ಸಂಭ್ರಮದಲ್ಲಿದೆ. ಆದರೆ ಈ ಸಾಧಕರ ಕೃತಿಗಳನ್ನು ಹಂಪಿ ಕನ್ನಡ ವಿವಿ, ಮಂಗಳೂರು ವಿವಿ ಸಹಿತ ಗ್ರಂಥಾಲಯ ಇಲಾಖೆ ನಿರ್ಲಕ್ಷಿಸಿದೆ ಎಂದು ಖೇದ ವ್ಯಕ್ತಪಡಿಸಿದ ಮೊಗಸಾಲೆಯವರು ಕಾಂತಾವರ ಹಾಗೂ ಕನ್ನಡ ಸಂಘದ ಕೆಲಸಗಳನ್ನು ಜನತೆ ಬೆಂಬಲಿಸಿದ ರೀತಿಯನ್ನು ಕಾಣುವಾಗ ಹೃದಯ ತುಂಬಿ ಬರುತ್ತದೆ ಎಂದು ಗದ್ಗದಿತರಾದರು.


