ಕೈಕಂಬ: ಶ್ರೀಪೊಳಲಿ ದೀಪಸ್ತಂಭ ನವೀಕರಣ ಸಮಿತಿ ವತಿಯಿಂದ ಗಾಣಿಗ ಸಮಾಜದ ಬಾಂಧವರು ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ಸೇವಾ ರೂಪವಾಗಿ ನೀಡಿದ ಕಂಚು ದೀಪವನ್ನು ನವೀಕರಣಗೊಳಿಸಲಾಗುತ್ತಿದ್ದು, ಇದರ ಆಧಾರ ಶಿಲೆ ಮತ್ತು ಶಿಲಾಪೀಠವನ್ನು ಫೆ.24ರ ಭಾನುವಾರ ಬೆಳಿಗ್ಗೆ ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಪಾದಯಾತ್ರೆಯಲ್ಲಿ ಭವ್ಯ ಮೆರವಣಿಗೆಯ ಮೂಲಕ ಶ್ರೀಕ್ಷೇತ್ರಕ್ಕೆ ತರಲಾಯಿತು.
ಕಾರ್ಕಳದ ಶಿಲ್ಪಿ ಹರೇಕಳ ಕೃಷ್ಣ ಆಚಾರ್ಯ ಅವರ ಗರಡಿಯಲ್ಲಿ ಈ ಆಧಾರ ಶಿಲೆ ಹಾಗೂ ಶಿಲಾಪೀಠವನ್ನು ಕೆತ್ತಲಾಗಿದ್ದು, ಅಲ್ಲಿ ಸಮಸ್ತ ಪೂಜಾವಿದಿವಿಧಾನಗಳನ್ನು ಕೈಗೊಂಡು ಎಡಪದವಿನ ಶ್ರೀರಾಮ ಭಜನಾ ಮಂದಿರಕ್ಕೆ ತರಲಾಯಿತು. ಭಾನುವಾರ ಬೆಳಿಗ್ಗೆ ಎಡಪದವಿನಿಂದ ವಾಹನ ಜಾಥಾದ ಮೂಲಕ ಗಂಜಿಮಠ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮತ್ತೆ ವಾಹನ ಜಾಥಾದ ಮೂಲಕ ಗುರುಪುರ ಕೈಕಂಬದ ಪೊಳಲಿ ದ್ವಾರದವರೆಗೆ ತರಲಾಯಿತು.
ಪೊಳಲಿ ದ್ವಾರದಲ್ಲಿ ತೆಂಗಿನಕಾಯಿ ಹೊಡೆಯುವ ಮೂಲಕ ಕಾಲ್ನಡಿಗೆ ಜಾಥಕ್ಕ ಚಾಲನೆನೀಡಲಾಯಿತು. ಬಳಿಕ ಕಾಲ್ನಡಿಗೆಯ ಭವ್ಯ ಮೆರವಣಿಗೆಯ ಮೂಲಕ ಶ್ರೀಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಸುಮಾರು ಎರಡೂವರೆ ಸಾವಿರಕ್ಕೂ ಅದಿಕ ಮಂದಿ ಭಕ್ತರು ಕಾಲ್ನಡಿಗೆಯಲ್ಲಿ ಭಾಗವಹಿಸಿದ್ದರು. ಆಗಮಿಸಿದ ಭಕ್ತರಿಗೆ ಲಘುಪಾನೀಯ, ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪೊಳಲಿ ವೆಕಟೇಶ್ ತಂತ್ರಿ, ಸುಬ್ರಹ್ಮಣ್ಯತಂತ್ರಿ, ದೇವಳದ ಪ್ರ.ಅರ್ಚಕ ಮಾಧವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್ , ವಿಷ್ಣುಮೂರ್ತಿ ನಟ್ಟೋಜ, ಮಾಧವ ಮಯ್ಯ , ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಾಸಕ ರಾಜೇಶ್ ನಾೈಕ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ರಮಾನಾಥ ರೈ, ಪ್ರಧಾನ ಕಾರ್ಯದರ್ಶಿ ಯು. ತಾರನಾಥ ಆಳ್ವ ಉಳಿಪಾಡಿಗುತ್ತು, ಮೊಕ್ತೇಸರರಾದ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ಚೇರ ಸೂರ್ಯನಾರಾಯಣ ರಾವ್, ಸೇಸಪ್ಪ ಕೋಟ್ಯಾನ್ ಪಚನಡ್ಕ,ಹರಿಕೃಷ್ಣ ಬಂಟ್ವಾಳ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಶ್ರೀಪೊಳಲಿ ದೀಪಸ್ಥಂಭ ನವೀಕರಣ ಸಮಿತಿಯ ಅಧ್ಯಕ್ಷರು, ಸರ್ವಸದಸ್ಯರು ಇದ್ದರು.

