ಬಂಟ್ವಾಳ: ಇತಿಹಾಸ ಪ್ರಸಿದ್ಧ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.13ರ ವರೆಗೆ ನಡೆಯುವ ಪುನಃಪ್ರತಿಷ್ಠೆ,ಅಷ್ಟಬಂಧ , ನೂತನದ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವಕ್ಕೆ ಬಂಟ್ವಾಳ ತಾಲೂಕಿನಿಂದ ಹಸಿರುವಾಣಿ ಹೊರೆಕಾಣಿಕೆಯನ್ನು ಮಾ5 ರಂದು ಮಂಗಳವಾರ ನಡೆಯಲಿರುವ ಹಸಿರುವಾಣಿಹೊರೆಕಾಣಿಕೆಯ ಮೆರವಣಿಗೆಯ ಪೂರ್ವಸಿದ್ಧತೆಗಾಗಿ ಗುರುವಾರ ಬಿ.ಸಿರೋಡ್ ಹೋಟೆಲ್ ರಂಗೋಲಿಯಲ್ಲಿ ಬಂಟ್ವಾಳ ತಾಲೂಕಿನ ಸಮಸ್ತ ನಾಗರಿಕರ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ, ಪೊಳಲಿ ಕ್ಷೇತ್ರದ ಮಹತ್ವವನ್ನು ಅರಿತುಕೊಂಡು ತಾಯಿಯ ಆಶೀರ್ವಾದವನ್ನು ಪಡೆದುಕೊಂಡು ತಾಲೂಕಿನ ಎಲ್ಲ ಭಕ್ತರೂ ಒಟ್ಟಾಗಿ ಈ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಬೇಕು. ಮಾರ್ಚ್ 5ರಂದು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಇರುವ ಮೈದಾನದಲ್ಲಿ ಒಟ್ಟು ಸೇರಿ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರ ತಲುಪುವ ಸಂದರ್ಭ ಸಹಸ್ರಾರು ಮಂದಿ ಭಕ್ತರು ಒಟ್ಟಾಗಿ ದೇವರ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಬಡವ, ಶ್ರೀಮಂತ, ರಾಜಕೀಯ ಪಕ್ಷಗಳ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಸೇರುವ ಸಂದರ್ಭ ನಮಗೆ ಒದಗಿ ಬಂದಿದೆ ಎಂದರು.
ಹಿರಿಯ ಸಾಹಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಮತ್ತೋರ್ವ ಗೌರವಾಧ್ಯಕ್ಷ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಹಿಂದಿನ ಬ್ರಹ್ಮಕಲಶೋತ್ಸವದ ಕುರಿತು ವಿವರಿಸಿ, ಭಕ್ತರೆಲ್ಲರ ಒಗ್ಗೂಡಿಕೆಯ ಮಹತ್ವವನ್ನು ವಿವರಿಸಿದರು.
ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ್, ಮಂಜುನಾಥ ಭಂಡಾರಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಧಾರ್ಮಿಕ ಮುಖಂಡ ಕೈಯೂರು ನಾರಾಯಣ ಭಟ್ ಮಾತನಾಡಿ ಸಂಘಟನೆಯ ಶಕ್ತಿಯಿಂದ ದೇವರ ಸೇವೆ ನಡೆಯಬೇಕು ಎಂದು ಹೇಳಿದರು.
ಹೊರೆಕಾಣಿಕೆ ಸಮಿತಿಯ ಬಂಟ್ವಾಳ ತಾಲೂಕು ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಅವರು ಹೊರೆಕಾಣಿಕೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ನಾನಾ ಸಂಘಟನೆ, ಸಮುದಾಯ, ಪಕ್ಷಗಳ ಪ್ರಮುಖರಾದ ಜಗನ್ನಾಥ ಚೌಟ, ಚಂದ್ರಪ್ರಕಾಶ ಶೆಟ್ಟಿ ತುಂಬೆ, ಸುಲೋಚನಾ ಜಿ.ಕೆ.ಭಟ್, ದಿನೇಶ್ ಅಮ್ಟೂರು, ರಾಮದಾಸ್ ಮಜಿ, ಡಿ.ಎಂ.ಕುಲಾಲ್, ಭುವನೇಶ್ ಪಚ್ಚಿನಡ್ಕ, ಮೋಹನ ಕೆ. ಶ್ರೀಯಾನ್ ರಾಯಿ, ರವೀಂದ್ರ ಕಂಬಳಿ ಉಪಸ್ಥಿತರಿದ್ದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ದಾನಿಗಳಿಂದ ಹೊರೆಕಾಣಿಕೆಗೆ ಕೊಡುಗೆಗಳನ್ನು ಘೋಷಿಸಲಾಯಿತು.


