ಮೂಡುಶೆಡ್ಡೆ: ಮೂಡುಶೆಡ್ಡೆಯ ಬೊಟ್ಟಿಕೆರೆ ಸಮೀಪ ಗುರುವಾರ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳ ಮಾನಭಂಗಕ್ಕೆ ಯತ್ನಿಸಿ, ಆಕೆಯನ್ನು ಮರಕ್ಕೆ ಕಟ್ಟಿಹಾಕಿ, ಪ್ರಜ್ಞೆತಪ್ಪಿಸಿ ಆಕೆಯ ಆಭರಣ ಲೂಟಿ ಮಾಡಿದ್ದು ಯಾರೆಂದು ತೀವ್ರ ಕುತೂಹಲ ಮೂಡಿದೆ.

ಯಾಕೆಂದರೆ ಮೂಡುಶೆಡ್ಡೆಯ ಬೊಟ್ಟಿಕೆರೆ ಎಂಬುದು ತೀರಾ ಅಲ್ಲದ ಹಳ್ಳಿ ಪ್ರದೇಶವಾಗಿದ್ದು ಈ ಕೃತ್ಯವನ್ನು ಎಸಗಿದ್ದು ಇಲ್ಲಿನ ಬಲ್ಲವ್ಯಕ್ತಿಗಳೇ ಆಗಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ವಾಮಂಜೂರು, ಅದ್ಯಪಾಡಿ ಸಮೀಪದಲ್ಲಿ ಆಗೊಂದು ಈಗೊಂದು ಸರ ಕಸಿದು ಪರಾರಿಯಾಗುತ್ತಿರುವ ಪ್ರಕರಣ ನಡೆಯುತ್ತಲೇ ಇದೆ. ಇಲ್ಲಿನ ಕೆಲವು ಸ್ಥಳಿಯ ನಿವಾಸಿಗಳ ಬಗ್ಗೆ ಪೊಲೀಸರಿಗೆ ಹಿಂದಿನಿಂದಲೂ ಸಂಶಯವಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಾ ಸಾಗುತ್ತಿದ್ದಾರೆ.
ಅದ್ಯಪಾಡಿಯ ನಿವಾಸಿಯಾಗಿರುವ ಯುವತಿ ಇಲ್ಲಿನ ಕುದ್ರುವಿನಲ್ಲಿರುವ ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಬರುತ್ತಿದ್ದಳು. ಆದರೆ ಆಕೆ ತನ್ನ ಹಾಲ್ ಟಿಕೆಟ್ ಮರೆತಿದ್ದರಿಂದ ಮತ್ತೆ ಮನೆ ಕಡೆಗೆ ಹೆಜ್ಜೆ ಹಾಕಿದ್ದಳು. ಆಗ ಇಬ್ಬರು ಮುಸುಕುದಾರಿಗಳು ಆಕೆಯನ್ನು ಎಳೆದೊಯ್ದು, ಆಕೆಗೆ ಸ್ಪ್ರೇ ಎರಚಿ ಪ್ರಜ್ಞೆ ತಪ್ಪಿಸಿ, ಮರಕ್ಕೆ ಕಟ್ಟಿ ಹಾಕಿ ಚಿನ್ನಾಭರಣ ಎಳೆದೊಯ್ದು ಪರಾರಿಯಾಗಿದ್ದರು.
ಈ ವೇಳೆ ಆಕೆಗೆ ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬುದನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಆದರೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ವೈದ್ಯಕೀಯ ವರದಿ ಬಂದ ನಂತರವಷ್ಟೇ ದೃಢಪಡಿಸಬೇಕಾಗುತ್ತದೆ.
