ಬಂಟ್ವಾಳ:ಇಲ್ಲಿನ ಪ್ರಸಿದ್ಧ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀಜಿ ಮಂದಿರದಲ್ಲಿ ಭಗವಾನ್ ನಿತ್ಯಾನಂದ ಸ್ವಾಮೀಜಿ ವಿಗ್ರಹ ಪ್ರತಿಷ್ಠೆಯ 27ನೇ ವರ್ಷ ಮತ್ತು ಗೋವಿಂದ ಸ್ವಾಮೀಜಿ ವಿಗ್ರಹ ಪ್ರತಿಷ್ಠೆಯ 10ನೇ ವರ್ಷಾಚರಣೆ ಪ್ರಯುಕ್ತ ಭಾನುವಾರ ಬೆಳಿಗ್ಗೆ ಸ್ವಾಮೀಜಿದ್ವಯರ ಪಂಚಲೋಹ ವಿಗ್ರಹಕ್ಕೆ ಭಕ್ತರಿಂದ ಸ್ವತಃ ಸೀಯಾಳ ಅಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿತು.
ಇದೇ ವೇಳೆ ಅಪಾರ ಮಂದಿ ಭಕ್ತರು ಸರತಿ ಸಾಲಿನಲ್ಲಿ ಬಂದು ದೇವರ ಗರ್ಭಗುಡಿ ಪ್ರವೇಶಿಸಿ ಸ್ವಾಮೀಜಿದ್ವಯರ ವಿಗ್ರಹಕ್ಕೆ ಸ್ವತಃ ಸೀಯಾಳ ಅಭಿಷೇಕ ನೆರವೇರಿಸುವ ಮೂಲಕ ಸಂಭ್ರಮ ಪಟ್ಟರು. ಮಂದಿರದಲ್ಲಿ ಗಣಪತಿ ಹವನ, ಭಜನೆ, ವಿಶೇಷ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ರಜತ ಪಲ್ಲಕಿ ಉತ್ಸವ:
ಸಂಜೆ ನಡೆದ ಆಕರ್ಷಕ ರಜತಪಲ್ಲಕಿಯಲ್ಲಿ ಸ್ವಾಮೀಜಿ ಅವರ ಉತ್ಸವ ಮೂರ್ತಿ ಮೆರವಣಿಗೆ ಬಳಿಕ ನೇತ್ರಾವತಿ ನದಿ ಕಿನಾರೆಯಲ್ಲಿ ಕಟ್ಟೆಪೂಜೆ ನೆರವೇರಿತು. ಚಿಲಿಪಿಲಿ ಗೊಂಬೆ, ಕರಗ ನೃತ್ಯ, ಯಕ್ಷಗಾನ, ಹಾಸ್ಯ ಗೊಂಬೆ ಕುಣಿ, ಸ್ಯಾಕ್ಸೋಫೋನ್ ವಾದನ, ಚೆಂಡೆ, ಕೊಂಬು ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.
ಟ್ರಸ್ಟಿನ ಅಧ್ಯಕ್ಷ ಬಿ.ಯೋಗೀಶ ಸಪಲ್ಯ, ಗೌರವಾಧ್ಯಕ್ಷ ಸದಾನಂದ ಹೆಗ್ಡೆ, ಕಾಂಞಂಗಾಡು ಗುರುವನ ವಿದ್ಯಾನಂದ ಸ್ವಾಮೀಜಿ, ಪ್ರಮುಖರಾದ ಗಜೇಂದ್ರ ಪ್ರಭು, ರಾಮರಾಯ ಕಿಣಿ, ಬಿ.ದಿನೇಶ ಭಂಡಾರಿ, ಜಿ.ಆನಂದ, ಸುಲೋಚನಾ ಜಕ್ರಿಬೆಟ್ಟು, ಹರೀಶ ಪೂಜಾರಿ, ಸುರೇಶ ಕುಲಾಲ್, ಹರೀಶ ಶೆಟ್ಟಿ, ಮೋಹನ್ ಕೆ.ಶ್ರೀಯಾನ್ ರಾಯಿ, ಅರ್ಚಕ ಜಯರಾಮ ಭಟ್ ಮತ್ತಿತರರು ಇದ್ದರು. ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ರಂಗಭೂಮಿ ಕಲಾವಿದ ವಿಜಯಕುಮಾರ್ ಕೊಡಿಯಾಲ್ ಬೈಲು ಮತ್ತಿತರರು ಭೇಟಿ ನೀಡಿದರು.
