ಪೊಳಲಿ : ಪೊಳಲಿಗೆ ಹತ್ತಿರದ ಬಡಗಬೆಳ್ಳೂರು ಗ್ರಾಮದಲ್ಲಿ ಸುಮಾರು ಹತ್ತಾರು ವರ್ಷದಿಂದ ಹಡೀಲು ಬಿದ್ದಿದ್ದ(ಬಂಜರು) ಭೂಮಿಯಲ್ಲಿ ಶ್ರೀ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಅವರ ನೇತೃತ್ವದಲ್ಲಿ “ಹಸಿರು ಪ್ರಕೃತಿ” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ “ಸಮಾಜಸೇವೆ, ಗೋಸೇವೆ, ಭೂಸೇವೆ ಪ್ರಕೃತಿಯನ್ನು ಕೃಷಿಯ ಮುಖಾಂತರ ಹಚ್ಚಹಸಿರಿನಲ್ಲಿ ಕಂಗೊಳಿಸುವಂತೆ ಭೂಮಿತಾಯಿಯ ಸೇವೆಯಲ್ಲಿ ನಡೆಸಲಾದ ಭತ್ತದ ಬೆಳೆಯನ್ನು ಬೆಳೆಸಿ ಕೃಷಿ ಮಾಡಿ ಕೊಯಿಲಿಗೆ ಬಂದ ಬತ್ತದ ಕಟಾವು ಕಾರ್ಯಕ್ರಮವು ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಹಾಗೂ ಊರವರು ಜೊತೆಗೂಡಿ ಗುರುವಾರ ಕಟಾವು ನಡೆಸಲಾಯಿತು.
ಕಾರಣಾಂತರದಿಂದ ಸ್ಥಳೀಯವಾಗಿ ಭತ್ತದ ಗದ್ದೆಗಳು ಕೆಲವು ವರ್ಷಗಳಿಂದ ಹಡೀಲು ಬಿದ್ದಿದ್ದು, ಇದರಲ್ಲಿ ಭತ್ತದ ಕೃಷಿ ನಡೆಸುವ ಉದ್ದೇಶದಿಂದ ನಾಲ್ಕು ತಿಂಗಳ ಹಿಂದೆ ಸ್ವಾಮೀಜಿಯವರು ಊರಿನ ಕೃಷಿ ಆಸಕ್ತರನ್ನು ಒಟ್ಟು ಸೇರಿಸಿ, ಹಡೀಲು ಭೂಮಿಯ ಮಾಲಕರ ಸಂಪರ್ಕಿಸಿ ಮಾತುಕತೆ ನಡೆಸಿದರು. ಇದರ ಫಲವಾಗಿ ಸ್ವಾಮೀಜಿ ನೇತೃತ್ವದಲ್ಲಿ `ಹಸಿರು ಪ್ರಕೃತಿ’ ಎಂಬ ಸಂಸ್ಥೆಯೊಂದು ಹುಟ್ಟಿಕೊಂಡಿತು. ಈ ಸಂಸ್ಥೆಯ ಸ್ವಯಂಸೇವಕರು ತಕ್ಷಣದಿಂದಲೇ ಬಡಗಬೆಳ್ಳೂರಿನ ಸುಮಾರು ಮೂರೂವರೆ ಎಕ್ರೆ ಹಡೀಲು ಭೂಮಿ ಹದಗೊಳಿಸಿ ಭತ್ತದ ನಾಟಿ ಮಾಡಿದ್ದರು.
ಇಂದು ನಡೆದ ಭತ್ತದ ಕಟಾವಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ಎನ್ನೆಸ್ಸೆಸ್ಸಿನ 60 ಹುಡುಗಿಯರು ಮತ್ತು 24 ಹುಡುಗರು ಊರವರೊಂದಿಗೆ ಸೇರಿಕೊಂಡು ಅತಿ ಚುರುಕುತನದಿಂದ ಭತ್ತದ ಕಟಾವು ಮಾಡಿದರು. ಭತ್ತದ ಕಟಾವು ಗದ್ದೆ ಪ್ರದೇಶಕ್ಕೆ ತೆರಳಿದ ವಿವೇಕಚೈತನ್ಯಾನಂದ ಸ್ವಾಮೀಜಿ ಮಕ್ಕಳಿಗೆ ಉತ್ತೇಜನ ನೀಡಿದರು.
ಎನ್ನೆಸ್ಸೆಸ್ ಅಧಿಕಾರಿಗಳಾದ ಡಾ. ಭಾರತಿ ಪಿಲಾರ್ ಮತ್ತು ಸಂಜಯ ಅಣ್ಣಾರಾವ್ ಅವರು ವಿದ್ಯಾರ್ಥಿಗಳಾದ ಅಭಿಷೇಕ್, ಸಂಪತ್, ದೇವರಾಜ್, ಬಸವರಾಜ್, ಕಾರ್ತಿಕ್, ವೀರೇಶ್, ಅಖಿಲಾ, ಮೆಹಫೂಪ, ನಿಶಾ ಹಾಗೂ ಮಹಾದೇವಿ ಮೂಲಕ ಎನ್ನೆಸ್ಸೆಸ್ ತಂಡ ನಿರ್ವಹಿಸಿದರು. ಈ ತಂಡದಲ್ಲಿ ಒಟ್ಟು 102 ವಿದ್ಯಾರ್ಥಿಗಳಿದ್ದು, ಇವರು ತಪೋವನದಲ್ಲಿದ್ದುಕೊಂಡು ಸ್ಥಳೀಯವಾಗಿ ಒಟ್ಟು ಐದು ದಿನಗಳ ಶಿಬಿರ ನಡೆಸಲಿದ್ದಾರೆ. ಡಿ. 20ರಂದು ಬಡಗಬೆಳ್ಳೂರಿನಲ್ಲಿ ಒಂದು ದಿನ ಹಡೀಲು ಭೂಮಿಯಲ್ಲಿ ಭತ್ತದ ಕಟಾವು ನಡೆಸಿದರು.
ಮಹಾಬಲ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ಮಂಜುಳಾ ಆರ್ ಶೆಟ್ಟಿ ಮತ್ತು ನಾರಾಯಣ ಪೂಜಾರಿ ದೂಪೆಮಾರ್ ಅವರ ಹಡೀಲು ಭೂಮಿಯಲ್ಲಿ ನಡೆಸಲಾದ ಭತ್ತದ ಕಟಾವಿನ ಸಂದರ್ಭದಲ್ಲಿ ರಾಧಾಕೃಷ್ಣ ಆಳ್ವ ಬೆಳ್ಳೂರು, ಸಂದೀಪ್(ಶ್ರೀ ಆದಿಶಕ್ತಿ ದೇವಳದ ಕ್ಷೇತ್ರಾಧಿಕಾರಿ), ಉಮೇಶ್ ಶೆಟ್ಟಿ ಪರಿಮೊಗರು, ಪ್ರಭಾಕರ, ತಿಮ್ಮಪ್ಪ ಶೆಟ್ಟಿ, ವಾಮನ ಪೂಜಾರಿ, ಪ್ರಸನ್ನ ಬೆಳ್ಳೂರು, ಲತೀಶ್ ಬಂಗೇರ, ರಮೇಶ್ ಬಟ್ಟಾಜೆ, ಅನಂತರಾಮ ಹೇರಳ, ಭಾಸ್ಕರ ಆಚಾರ್ಯ, ರವೀಂದ್ರ ಬೆಳ್ಳೂರು, ಪ್ರಕಾಶ್, ಕೇಶವ ಪೊಳಲಿ, ಚಂದ್ರಶೇಖರ ರಾವ್, ಶಶಿಕಿರಣ್ ಮೊದಲಾದವರು ಸಹಕರಿಸಿದರು.
“ಸಮಾಜಸೇವೆ, ಗೋಸೇವೆ,ಭೂಸೇವೆ ಹಾಗೂ ಪರಿಸರ ಪ್ರೇಮದಿಂದ ಊರಲ್ಲಿ ಕೆಲಸ ಮಾಡಬೇಕೆಂಬ ಕನಸು ಕಂಡವ ನಾನು. ಈ ನಿಟ್ಟಿನಲ್ಲಿ ಕೆಲವು ತಿಂಗಳ ಹಿಂದೆಯಷ್ಟೇ `ಹಸಿರು ಪ್ರಕೃತಿ’ ಎಂಬ ಸಂಸ್ಥೆ ಹುಟ್ಟುಹಾಕಿ ಆ ಮೂಲಕ ಕೃಷಿ ಚಟುವಟಿಕೆ ಆರಂಭಿಸಿದ್ದೇವೆ. ಇದಕ್ಕೆ ಊರವರಿಂದ ಪೂರ್ಣ ಬೆಂಬಲ ಸಿಕ್ಕಿದೆ. ಸುತ್ತಲ ಪ್ರದೇಶದಲ್ಲಿರುವ ಉಳಿದ ಹಡೀಲು ಭೂಮಿಯಲ್ಲೂ ಬೇಸಾಯ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ” ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿವಿವೇಕಚೈತನ್ಯಾನಂದ ಹೇಳಿದರು.



