ಮೂಡುಬಿದಿರೆ : ಬೆಳುವಾಯಿ, ದರೆಗುಡ್ಡೆ, ಕೆಲ್ಲಪುತ್ತಿಗೆ ಪ್ರದೇಶದ ನೂರಾರು ಎಕ್ರೆ ಭೂಮಿಯಲ್ಲಿ ಈಗಾಗಲೇ ನಾಟಿ ಮಾಡಲಾಗಿರುವ, ಬಿತ್ತನೆ ನಡೆಸಿರುವ ಗದ್ದೆಗಳಲ್ಲಿ ರಸ ಹೀರುವ ಕೀಟಗಳು ಎಳೆಯ ಎಲೆಗಳ ರಸವನ್ನೇ ಹೀರಿ ಬೆಳೆಗಳೆಲ್ಲ ಸಾಯುತ್ತಿವೆ. ಈ ನಷ್ಟದಿಂದ ರೈತರು ಕಂಗಾಲಾಗಿರುವುದನ್ನು ಮನಗಂಡಿರುವ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿ ಪ್ರದೀಪ ಎಂ. ಅವರು ಮಂಗಳವಾರ ದರೆಗುಡ್ಡೆಗೆ ಆಗಮಿಸಿ ಕೀಟ ಬಾಧಿತ ಸಸ್ಯಗಳನ್ನು ಪರಿಶೀಲಿಸಿ ಪರಿಹಾರ ಮಾರ್ಗಗಳನ್ನು ಸೂಚಿಸಿದರು.
ಈಗಾಗಲೇ ಕಾರ್ಕಳ ಪರಿಸರದಲ್ಲಿ ಕಾಣಿಸಿಕೊಂಡಿರುವ ಇಂಥದ್ದೇ ಕೀಟ ಬಾಧೆಗೆ ಶಿಫಾರಸು ಮಾಡಿ ಸಿಂಪಡಿಸಲಾಗಿರುವ ಅಸಿಫಾಟ್ ಮತ್ತು ಡಿಡಿವಿಪಿ ಮಿಶ್ರಣವನ್ನು ಇಲ್ಲಿಯೂ ಬಳಸಬಹುದ್ದಾಗಿದ್ದು,. ಗದ್ದೆಯಲ್ಲಿರುವ ನೀರನ್ನು ಹೊರಗೆ ಹರಿಯಿಸಬೇಕು. ಅಸಿಫಾಟ್ ಪೌಡರ್ 1ರಿಂದ 2 ಗ್ರಾಂನಷ್ಟನ್ನು ಒಂದು ಲೀ. ನೀರಲ್ಲಿ ಕಲಸಬೇಕು. ಡಿಡಿವಿಪಿ ಅರ್ಧ ಎಂ. ಎಲ್ ದ್ರಾವಣವನ್ನು ಒಂದು ಲೀಟರ್ ನೀರಲ್ಲಿ ಕಲಸಬೇಕು . ಈ ಎರಡನ್ನೂ ಬೆರೆಸಿ ರೋಗಪೀಡಿತ ಸಸಿಗಳಿಗೆ ಸಿಂಪಡಿಸಬೇಕು. ಮುಂದೆ 15 ದಿನಗಳಿಗೊಮ್ಮೆ ಇದೇ ಮದ್ದು ಸಿಂಪಡಿಸಬೇಕು. ಎರಡನೇ ಬೆಳೆಯಾಗಿ ಸಾಧ್ಯವಿರುವೆಡೆಗಳಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಸುವ ಮೂಲಕವೂ ಇಂಥ ಕೀಟ ಬಾಧೆಯನ್ನು ನಿವಾರಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ದರೆಗುಡ್ಡೆಯ ರಾಜವರ್ಮ ಬೈಲಂಗಡಿ, ಪಡುಬೆಟ್ಟು ಅರಮನೆ ಬೈಲು ಪ್ರದೇಶ, ಹತ್ತಿರದ ಸದಾಶಿವ ಶೆಟ್ಟಿ , ಕರಿಯ ಪೂಜಾರಿ, ಜೆರಾಲ್ಡ್ ಲೋಬೋ, ಭರತೇಶ, ಫೆಡ್ರಿಕ್ ರೋಡ್ರಿಗಸ್, ಕೆ.ಕೆ. ತಂತ್ರಿ, ಕೆಲ್ಲಪುತ್ತಿಗೆ ವಜ್ರನಾಭ ಹೆಗ್ಡೆ, ಕಾಶಿಪಟ್ಣದ ಪಿ.ಕೆ. ರಾಜು ಪೂಜಾರಿ ಎಲ್ಲರ ಸಮಸ್ಯೆಯೂ ಒಂದೇ ಎಂದು ತಿಳಿದುಬಂದಿದೆ.
ಮೂಡುಬಿದಿರೆ ಕೃಷಿ ವಿಚಾರವಿನಿಮಯ ಕೇಂದ್ರದ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಹಾಲಿ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಕಾಶಿಪಟ್ಣದ ಪಿ.ಕೆ. ರಾಜು ಪೂಜಾರಿ ಉಪಸ್ಥಿತರಿದ್ದರು.
ಮೊದಲೇ ಭತ್ತದ ಕೃಷಿಯಿಂದ ರೈತರು ಹಿಂದೆ ಸರಿಯುತ್ತಿದ್ದಾರೆ. ಈಗ ಈ ಕೀಟ ಬಾಧೆ, ರೋಗ ಬಾಧೆ ಎಲ್ಲ ಕಡೆ ಕಾಣಿಸಿಕೊಂಡು ಭತ್ತದ ಕೃಷಿ ನಾಶವಾಗುವುದಾದರೆ ಮುಂದೆ ಸಾಗುವಳಿ ಯಾರು ಮಾಡುತ್ತಾರೆ? ಭತ್ತದ ಕೃಷಿಯ ಮೇಲಿನ ಆಸಕ್ತಿ ಇನ್ನು ಕಡಿಮಡಯಾಗುತ್ತದೆ. ಸರಕಾರ ಇತ್ತ ಗಮನ ಹರಿಸಿ ಸೂಕ್ತ ಪರಿಹಾರ ಒದಗಿಸಬೇಕಾಗಿದೆ’ ಎಂದು ಆಗ್ರಹಿಸಿದರು.


