ಬಂಟ್ವಾಳ : ದೇಶದ ಕೋಟ್ಯಾಂತರ ಜನರ ಆಶೋತ್ತರವಾಗಿ ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲು ನಡೆಸಿದ ರುದ್ರಯಾಗ ಫಲಿಸುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಹೇಳಿದರು.ಅವರು ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಪದವು ಸಮೀಪದ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಶ್ರೀ ರಾಮಾಂಜನೇಯ ಭಜನ ಮಂದಿರದ 4ನೇ ವರ್ಷದ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಭಜನ ಮಂದಿರದ ವಠಾರದಲ್ಲಿ ಬುಧವಾರ ಜರಗಿದ ರುದ್ರಯಾಗದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಅವರು ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ, ದೇಶವನ್ನು ವಿಶ್ವ ಗುರುವನ್ನಾಗಿಸುವ ಅಪೇಕ್ಷೆ ಹೊಂದಿದ ಮತ್ತು ದೇಶಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿರಿಸಿದ ನರೇಂದ್ರ ಮೋದಿ ಅವರು ಮುಂದಕ್ಕೂ ಪ್ರಧಾನಿಯಾಗುವಂತೆ ಕೈ ಜೋಡಿಸಬೇಕು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರ ಚಿಂತನೆಯಿಂದ ಸಮಾಜಮುಖಿ ಕಾರ್ಯ ನಡೆಸಿದ ಮೈರ ಗೆಳೆಯರ ಬಳಗ ಮಾದರಿಯಾಗಿದ್ದಾರೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಶೆಟ್ಟಿ, ಸಂಗಬೆಟ್ಟು ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಉದ್ಯಮಿ ಪ್ರಮೋದ್ ಕುಮಾರ್ ಕುರುವರಗೋಳಿ, ಉಳಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ವಸಂತ್ ಸಾಲ್ಯಾನ್ ರಾಮನಗರ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುದರ್ಶನ್ ಬಜ, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಉಮೇಶ್ ಪೂಜಾರಿ, ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು, ಪ್ರಗತಿಪರ ಕೃಷಿಕ ನಾರಾಯಣ ಪೂಜಾರಿ ಬೊಳ್ಳುಕಲ್ಲು, ಉದ್ಯಮಿ ಕುಸುಮೋದರ ಉರ್ಕಿ, ಸರಪಾಡಿ ಗ್ರಾ.ಪಂ.ಸದಸ್ಯ ಧನಂಜಯ ಶೆಟ್ಟಿ, ಗ್ರಾ.ಪಂ. ಸದಸ್ಯ ಚಿದಾನಂದ ಮೈರ, ಗೆಳೆಯರ ಬಳಗದ ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಪದಾ„ಕಾರಿಗಳಾದ ಸುರೇಶ್ ಮೈರ, ಶಿವಾನಂದ ಮೈರ, ತುಷಾರ್ ಭಂಡಾರಿ, ಸುರೇಂದ್ರ, ರಜನೀಶ್, ಪುರಂದರ ಕುಕ್ಕಾಜೆ, ವಸಂತ ಕಾಯರ್ಪಲ್ಕೆ, ಬಾಲಕೃಷ್ಣ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿಎಸ್ಸೆಸೆಲ್ಸಿಯಲ್ಲಿ 610 ಅಂಕ ಗಳಿಸಿದ ವಿದ್ಯಾರ್ಥಿನಿ ಪ್ರಿಯಾಂಕ ಮಾಮಾಯಿ ಅವರನ್ನು ಸಮ್ಮಾನಿಸಲಾಯಿತು. ಗೆಳೆಯರ ಬಳಗದ ಮಾಜಿ ಅಧ್ಯಕ್ಷ, ನ್ಯಾಯವಾದಿ ರಂಜಿತ್ ಮೈರ ಸ್ವಾಗತಿಸಿದರು. ಪ್ರಶಾಂತ ಮೈರ ವಂದಿಸಿದರು. ಬಬಿತಾ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೆ ಮುನ್ನ ವೇ|ಮೂ| ಕೊಡಂಬೆಟ್ಟು ಶ್ರೀ ರಾಘವೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪುನರುತ್ಥಾನಕ್ಕೆ ಮತ್ತೊಮ್ಮೆ ಪ್ರಧಾನಿ ಗದ್ದುಗೆಯನ್ನು ಅಲಂಕರಿಸಿ, ವಿಶ್ವ ನಾಯಕನಾಗಲು ವಿಶ್ವನಾಥನ ಅನುಗ್ರಹಕ್ಕೋಸ್ಕರ, ಲೋಕಕಲ್ಯಾಣವಾಗುವ ಸದುದ್ದೇಶದಿಂದ ರುದ್ರಯಾಗ ನಡೆಯಿತು.
