ಮೂಡುಬಿದಿರೆ: ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಮುಲ್ಕಿ-ಮೂಡುಬಿದರೆ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಇಲ್ಲಿನ ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಹದಿನಾರನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ವೇದಿಕೆಯಲ್ಲಿ `ತುಳು ಲಿಪಿ’ ಬಳಕೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ತುಳು ಲಿಪಿಯನ್ನು ಕಂಬಳದ ವೇದಿಕೆಯಲ್ಲಿ ಬಳಸಿದ್ದರಿಂದ ತುಳು ಭಾಷೆಯ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ.

ವೇದಿಕೆಯ ಮುಂಭಾಗದಲ್ಲಿ ತುಳುನಾಡಿನ ಹೆಮ್ಮೆಯ ವೀರರಾದ `ಕೋಟಿ-ಚೆನ್ನಯ’ ಹೆಸರನ್ನು ತುಳು ಲಿಪಿಯಲ್ಲಿ ಬರೆಯಲಾಗಿದೆ. ವೇದಿಕೆಯಲ್ಲಿ ಕನ್ನಡದಲ್ಲಿ ಬರೆದಿರುವ `ಹದಿನಾರನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಬಯಲು ಕಂಬಳೋತ್ಸವ. ಕಡಲಕೆರೆ ನಿಸರ್ಗದಾಮ, ವೀರ ರಾಣಿ ಅಬ್ಬಕ್ಕ ಸಂಸ್ಕøತಿ ಗ್ರಾಮ ಒಂಟಿಕಟ್ಟೆ, ಮೂಡುಬಿದಿರೆ, ದ.ಕ ಹಾಗೂ ದಿನ, ದಿನಾಂಕವನ್ನು ತುಳು ಲಿಪಿಯಲ್ಲೇ ಬರೆಯಾಲಾಗಿದೆ.
ಒಂದು ಕಡೆ ತುಳು ಲಿಪಿಗೆ ಗೌರವ ಸಂದಿದೆ, ಮತ್ತೊಂದು ಕಡೆ ಪೂರ್ಚುಗೀಸರ ವಿರುದ್ಧ ಹೋರಾಡಿದ ಚೌಟ ರಾಣಿ, ಮೂಡುಬಿದಿರೆ ಮಣ್ಣಿನ ಮಗಳು ವೀರ ರಾಣಿ ಅಬ್ಬಕ್ಕಗಳನ್ನು ಮೂಡುಬಿದಿರೆ ಕಂಬಳದಲ್ಲಿ ಸ್ಮರಿಸಲಾಗಿದೆ. ಅಬ್ಬಕ್ಕಳ ಭಾವಚಿತ್ರವನ್ನು ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗಿದೆ.
ಒಂಟಿಕಟ್ಟೆಗೆ ವೀರ ರಾಣಿ ಅಬ್ಬಕ್ಕ ಸಂಸ್ಕøತಿ ಗ್ರಾಮ ಎಂದು ಹೆಸರಿಸಿ ಕಳೆದ 15 ವರ್ಷಗಳಿಂದ ಕೆ.ಅಭಯಚಂದ್ರ ಜೈನ್ ನೇತೃತ್ವದಲ್ಲಿ ನಡೆದಿರುವ ಕಂಬಳಗಳು ಕೂಡ ಗಮನಾರ್ಹ. ಅಬ್ಬಕ್ಕ ವಂಶಸ್ಥರಾದ ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ. ಚೌಟರ ಅರಮನೆಗೆ ಆಡಳಿತಕ್ಕೊಳಪಟ್ಟ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದ ಪ್ರಸಾದವನ್ನು ಕಂಬಳದ ಕರೆಗೆ ಹಚ್ಚುವುದು ಕೂಡ ಸಾಂಪ್ರಾದಾಯಿಕ ಆಚರಣೆ. ಇಂತಹದೊಂದು ಸಂಪ್ರದಾಯ ಮೂಡುಬಿದಿರೆಯ 16 ವರ್ಷಗಳ ಕಂಬಳಗಳಲ್ಲಿ ಕಾಣಸಿಕ್ಕಿರುವುದು ವಿಶೇಷ.


