ಮೂಡುಬಿದಿರೆ: ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮೂಡುಕೋಣಾಜೆಯ ಸಂತೋಷ್ ದಂಪತಿಯ ಪುತ್ರಿ ಸಾನ್ವಿ ಚಿಕಿತ್ಸೆಯ ನೆರವಿಗಾಗಿ ಮೂಡುಬಿದಿರೆಯ ಜವನೆರ್ ಬೆದ್ರ ಸಂಘಟನೆಯು ಕ್ರೋಢೀಕರಿಸಿರುವ ರೂ 1 ಲಕ್ಷ ಸಹಾಯಧನವನ್ನು ಭಾನುವಾರ ಸಮಾಜಮಂದಿರದಲ್ಲಿ ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಅವರು ಹಸ್ತಾಂತರಿಸಿದರು.
ನಂತರ ಆಶಿರ್ವಚನ ನೀಡಿದ ಶ್ರೀಗಳು, ಯುವಜನತೆಯನ್ನು ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯವನ್ನು ಜವನೆರ್ ಬೆದ್ರ ಸಂಘಟನೆಯು ಕಳೆದ ಎರಡು ವರ್ಷಗಳಿಂದ ಮಾಡುತ್ತಾ ಬಂದಿದೆ. ಮೂಡುಬಿದಿರೆ ಪೇಟೆಯಲ್ಲಿ ಬಿದ್ದಿರುವ ಹಾಗೂ ಬೀರುತ್ತಿರುವ ಕಸಕಡ್ಡಿಗಳನ್ನು ಪ್ರತಿ ಭಾನುವಾರದಂದು ಸ್ವಚ್ಛತಾ ಅಭಿಯಾನ `ಕ್ಲೀನ್ ಅಪ್ ಮೂಡುಬಿದಿರೆ’ ಹಮ್ಮಿಕೊಳ್ಳುವ ಮೂಲಕ ಸ್ವಚ್ಛ ನಗರವನ್ನು ಮಾಡುತ್ತಿದೆ. ರಕ್ತದಾನ ಹಾಗೂ ಸಮಸ್ಯೆಗಳಿಗೆ ಸ್ಪಂದಿಸಿ ಮಾನವೀಯ ಮೌಲ್ಯಗಳನ್ನು ಉಳಿಸುವಂತಹ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ಕೋಟೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಂಘಟನೆಯು ಸರ್ವರ ಸಹಕಾರ, ಮಾರ್ಗದರ್ಶನದೊಂದಿಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ಮಗುವಿನ ಚಿಕಿತ್ಸೆಗಾಗಿ ವಿಕ್ಕಿ ಶೆಟ್ಟಿ ಅವರು ಆಳ್ವಾಸ್ ನುಡಿಸಿರಿ ಸಂದರ್ಭದಲ್ಲಿ ವೇಷ ಧರಿಸಿ ಹಣವನ್ನು ಸಂಗ್ರಹಿಸಿದ್ದು ಇದು ತಮಗೆ ಸಹಕಾರಿಯಾಯಿತು ಎಂದರು.
ಗೋಪಾಲಕೃಷ್ಣ ದೇವಾಸ್ಥಾನದ ಟ್ರಸ್ಟಿ ಶಿವಾನಂದ ಪ್ರಭು, ಆಳ್ವಾಸ್ನ ಉಪನ್ಯಾಸಕ ಧಿರೇಂದ್ರ ಜೈನ್, ಕೆ.ಆರ್.ಶೆಟ್ಟಿ ಅಡ್ಯಾರಪದವು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಂಘಟನೆಯ ಹರಿಪ್ರಸಾದ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಪಣಪಿಲ ಕಾರ್ಯಕ್ರಮ ನಿರೂಪಿಸಿದರು.
ನುಡಿಸಿರಿಯಲ್ಲಿ ಹಾಕಿದ ವೇಷಕ್ಕೆ 80 ಸಾವಿರ ಸಂಗ್ರಹ
ಆಳ್ವಾಸ್ ನುಡಿಸಿರಿಯ ಕೊನೆಯ ದಿನ, ವಿದ್ಯಾಗಿರಿ ಜಂಕ್ಷನ್ನಲ್ಲಿ ಜವನೆರ್ ಬೆದ್ರ ತಂಡದ ಸಾಂಘಿಕ ನಿವೇದನೆ, ತಂಡದ ಸದಸ್ಯರೊಬ್ಬರು ಹಾಕಿದ ವೇಷಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಜನರು ಸ್ಪಂದಿಸಿದ್ದು, 80 ಸಾವಿರ ರೂ. ಸಂಗ್ರವಾಗಿತ್ತು. ತಂಡದ ಸದಸ್ಯರು ಅದಕ್ಕೆ 20 ಸಾವಿರ ರೂ. ಸೇರಿಸಿ ಮಗುವಿನ ಚಿಕಿತ್ಸೆಗೆ ಧನ ಸಹಾಯ ಮಾಡಿದರು.

