ಮೂಡುಬಿದಿರೆ: ಐತಿಹಾಸಿಕ ಪ್ರಜ್ಞೆ, ತಮ್ಮದೇ ಶೈಲಿಯಲ್ಲಿ ಸಮಾಜ ಸೇವೆ ಮಾಡುವ ಮೂಲಕ ಮೂಡುಬಿದಿರೆ ತಾಲೂಕಿನಲ್ಲಿ ಸಕ್ರಿಯರಾಗಿರುವ `ಜವನೆರ್ ಬೆದ್ರ’ ಸಂಘಟನೆ ಈ ಬಾರಿಯ ದೀಪಾವಳಿಯನ್ನು ಯೋಧರಿಬ್ಬರ ಮನೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಿದೆ.

ಮೂಡಬಿದಿರೆಯ ಮಾಸ್ತಿಕಟ್ಟೆ ನಿವಾಸಿಗಳಾದ ಶಾಂತಿರಾಜ ಹೆಗ್ಡೆ ಮತ್ತು ಐರಾವತೀದೇವಿ ಅವರ ಇಬ್ಬರು ಮಕ್ಕಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದಂಪತಿಯ ಪುತ್ರ ಮಹಾವೀರ್ ಜೈನ್ 20 ವರ್ಷದಿಂದ ಭಾರತೀಯ ಸೇನೆಯಲ್ಲಿದ್ದಾರೆ. ಈಗ ಬೆಂಗಳೂರಿನಲ್ಲಿ ಎನ್.ಸಿ.ಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಇವರ ಸಹೋದರ ಮಹೇಂದ್ರ ಜೈನ್ ಭಾರತೀಯ ಸೇನೆಯಲ್ಲಿ 14 ವರ್ಷದಿಂದ ಕರ್ತವ್ಯ ಮಾಡುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಇವರಿಬ್ಬರು ತಮ್ಮ ಸೇವೆಯಲ್ಲಿ ತೊಡಗಿದ್ದು, ಜವನೆರ್ ಬೆದ್ರ ಇವರ ಮನೆಗೆ ಬಂದು ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಿದೆ. ದೇಶದ ಸೇವೆಗೆ ತಮ್ಮಿಬ್ಬರು ಮಕ್ಕಳನ್ನು ಕಳುಹಿಸಿದ ದಂಪತಿಯನ್ನು ಸನ್ಮಾನಿಸಲಾಯಿತು. ಗೋವುಗೆ ಪೂಜೆಗೈದು, ಸಿಹಿತಿಂಡಿ ಹಂಚಿ, ಸುಡುಮದ್ದು ಸಿಡಿಸಿ ದೀಪಾವಳಿ ಆಚರಿಸಲಾಯಿತು.
ತನ್ನ ಮನೆಯಲ್ಲಿ ಜವನೆರ್ ಬೆದ್ರ ಸಂಘಟನೆಯವರು ದೀಪಾವಳಿಯ ಆಚರಿಸುತ್ತಿರುವುದನ್ನು ವಿಡಿಯೋ ಕಾಲ್ ಮೂಲಕ ವೀಕ್ಷಿಸಿದ ಮಹೇಂದ್ರ ಜೈನ್ ಅವರು ಬಾವುಕರಾದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಕೂಡ ಬಾವುಕರಾಗಿದ್ದಾರೆ. ಇಡೀ ಕಾರ್ಯಕ್ರಮವು ಭಾವನಾತ್ಮಕವಾಗಿ ನಡೆದು ದೀಪಾವಳಿ ಮಾದರಿ ಆಚರಣೆಯಾಯಿತು.
ನಿವೃತ್ತ ಯೋಧ ರಾಜೇಂದ್ರ ಜಿ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾರತೀಯ ಸೇನೆಯ ಸೇವೆಯ ಕುರಿತು ಮಾತನಾಡಿದರು. ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ಕೋಟೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಸುನಿಲ್ ಪಣಪಿಲ ನಿರೂಪಿಸಿದರು. ಜವನೆರ್ ಬೆದ್ರ ಸದಸ್ಯರಾದ ರವಿಪ್ರಸಾದ್, ರಂಜಿತ್ ಶೆಟ್ಟಿ, ವಿಕ್ಕಿ ಶೆಟ್ಟಿ, ಪ್ರತೀಕ್, ಸಂತೋಷ್, ಸುರೇಶ್, ಪ್ರತೀಷ್, ನಿತೇಶ್ ಕಡೆಪಳ್ಳ, ಹರಿಪ್ರಸಾದ್, ಅನಿಲ್, ಯೋಗ ಶಿಕ್ಷಕಿ ಸವಿತಾ ಸೇರಿದಂತೆ ಸದಸ್ಯರು ಪಾಲ್ಗೊಂಡರು.
