ಮೂಡುಬಿದಿರೆ: ಹಿರಿಯ ಸಮಾಜ ಸೇವಕ, ಪುರಸಭಾ ಮಾಜಿ ಸದಸ್ಯ ಬಿ.ಮೋಹನದಾಸ ಶೆಟ್ಟಿ(70) ಅಲ್ಪ ಕಾಲದ ಅಸೌಖ್ಯದಿಂದ ಅ.28ರಂದು ನಿಧನ ಹೊಂದಿದರು. ಅವರು ಪತ್ನಿ, ಮೂಡುಬಿದಿರೆ ಥರ್ಡ್ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಾಗಿರುವ ಪ್ರಫುಲ್ಲಾ ಎಂ. ಶೆಟ್ಟಿ, ಕೊಂಕಣ್ ರೈಲ್ವೇಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಪುತ್ರ ಮನೀಶ್, ಪುತ್ರಿ ನಿಶಾ ಅವರನ್ನು ಅಗಲಿದ್ದಾರೆ.

ಒಂದು ಅವಧಿಗೆ ಪುರಸಭಾ ನಾಮನಿರ್ದೇಶಿತ ಸದಸ್ಯರಾಗಿದ್ದರು. ಮೂಡುಬಿದಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಹಿರಿಯ ಸದಸ್ಯರಾಗಿ ಹಾಲಿ ಕೋಶಾಧಿಕಾರಿಯಾಗಿದ್ದ ಅವರನ್ನು ಸಮಿತಿ ವತಿಯಿಂದ ಈ ಬಾರಿ ಗಣೇಶೋತ್ಸವದಲ್ಲಿ ಸಮ್ಮಾನಿಸಲಾಗಿತ್ತು. ರಂಗನಟರಾಗಿ, ಚಾರಣಿಗರಾಗಿಯೂ ಗುರುತಿಸಿಕೊಂಡಿದ್ದರು. ಪ್ರಶಸ್ತಿ ಪುರಸ್ಕøತ ತುಳು ಸಿನಿಮಾ `ಸುದ್ಧ’ದಲ್ಲಿ ಗುರುವನ ಪಾತ್ರ, ಜಾತಿಯೋ ಜಾತಿ ತುಳು ಸಿನಿಮಾದಲ್ಲಿಯೂ ಕಾಣಿಸಿಕೊಂಡ ಶೆಟ್ಟರು ಮೂಡುಬಿದಿರೆಯಲ್ಲಿ ಜರಗಿದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶಾಲ ಸ್ವರಾಜ್ಯ ಮೈದಾನವನ್ನು ಸಮತಟ್ಟುಗೊಳಿಸುವಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದರು.
ಇತ್ತೀಚಿಗಷ್ಟೇ ತಮ್ಮ ಸಾವಿನ ಬಳಿಕ ದೇಹದಾನ ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದ ಮೋಹನದಾಸ ಶೆಟ್ಟಿಯವರ ಆಶಯದಂತೆ ಅವರ ದೇಹವನ್ನು ಮನೆಯಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಹಿತೈಶಿಗಳಿಂದ ಅಂತಿಮ ದರ್ಶನ,ನಮನದ ಬಳಿಕ ಮಂಗಳೂರಿನ ಎ.ಜೆ. ಆಸ್ಪತ್ರೆಯವರಿಗೆ ಹಸ್ತಾಂತರಿಸುವ ಮೂಲಕ ದಾನ ಮಾಡಲಾಯಿತು.
ಪ್ರತಿಫಲಾಪೇಕ್ಷೆಯಿಲ್ಲದ ಸೇವೆಯ ಮೂಲಕವೇ ಗುರುತಿಸಿಕೊಂಡ ಮೋಹನದಾಸ ಶೆಟ್ಟಿ ಅವರ ಮೂಲ ಹೆಸರು ಪರಮೇಶ್ವರ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವೇ ಹುಟ್ಟಿದ ಕಾರಣಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮಾವ ಶಂಭು ಶೆಟ್ಟರು ‘ಮೋಹನದಾಸ’ ಎಂದು ಹೆಸರು ಬದಲಿಸಿದ್ದರು.
