ಮಂಡ್ಯ: ರಾಜ್ಯ ಸರ್ಕಾರವು ದಸರಾ ವೇಳೆಗೆ ಬಿದ್ದು ಹೋಗುತ್ತೆ, ದೀಪಾವಳಿ ಹಬ್ಬದವರೆಗೆ ಪಕ್ಷ ಉಳಿಯುವುದಿಲ್ಲ ಎಂದು ದೃಶ್ಯ ಮಾಧ್ಯಮಗಳು ಇಚ್ಛೆ ಬಂದಂತೆ ವರದಿ ಮಾಡುತ್ತಿವೆ. ಆದರೆ ಮುದ್ರಣ ಮಾಧ್ಯಮದ ಸ್ನೇಹಿತರು ದಿನಪತ್ರಿಕೆಗಳಲ್ಲಿ ರಾಜ್ಯದ ಜನತೆಗೆ ನಿಖರವಾದ ವರದಿಯನ್ನು ನೀಡುತ್ತಾ ರಾಜ್ಯ ಸರ್ಕಾರದ ಜನಪರವಾದ ಕಾರ್ಯಕ್ರಮಗಳ ಬಗ್ಗೆ ಸತ್ಯಕ್ಕೆ ಹತ್ತಿರವಾದ ವರದಿ ಮಾಡುತ್ತಿದ್ದಾರೆ ಎಂದು ತಮ್ಮ ಮನದಾಳದ ನೋವನ್ನು ಹೊರಹಾಕಿದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡಿಲ್ಲ, ನಾನು ರಾಜ್ಯಕ್ಕೆ ಕತ್ತಲೆಯನ್ನು ನೀಡಲು ಮುಖ್ಯಮಂತ್ರಿಯಾಗಿಲ್ಲ, ದಯಮಾಡಿ ಮಾಧ್ಯಮಗಳು ನಿಖರವಾದ ವರದಿಯನ್ನು ಮಾಡಬೇಕು ಎಂಬುದಷ್ಟೇ ನನ್ನ ಮನವಿಯಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿದರು.
ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ನಡೆದ ಜೆಡಿಎಸ್ ಪಕ್ಷದ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗ ನಡೆಯುತ್ತಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೇಸ್-ಜೆಡಿಎಸ್ ಮೈತ್ರಿಕೂಟದ ಅಭ್ಯಥಿರ್üಗಳು ಗೆಲುವು ಸಾಧಿಸಲಿದ್ದಾರೆ. ರೈತಾಪಿ ವರ್ಗದ ಹಿತವನ್ನು ಕಾಪಾಡದೇ ರೈತವಿರೋಧಿಯಂತೆ ಕೆಲಸ ಮಾಡುತ್ತಾ ರಾಜ್ಯದ ಅಭಿವೃದ್ಧಿಯ ವಿರೋಧಿ ಆಗಿರುವ ಬಿಜೆಪಿ ಪಕ್ಷವನ್ನು ರಾಜ್ಯದ ಪ್ರಬುದ್ಧ ಮತದಾರರು ತಿರಸ್ಕರಿಸಬೇಕು ಎಂದು ಮನವಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ಪಕ್ಷವು ರೈತರ ಸ್ವಾಭಿಮಾನವನ್ನು ಎತ್ತಿಹಿಡಿದು, ರೈತರ ಸಾಲಮನ್ನಾ ಮಾಡುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ ಎಂದರು.
ನಾನು ದೈವಬಲದಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದು ರಾಜ್ಯದ ಸಮಗ್ರವಾದ ಅಭಿವೃದ್ಧಿಯನ್ನು ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದ್ದೇನೆ.ರಾಜ್ಯದ ಜನರು ಪಾವತಿಸಿರುವ ತೆರಿಗೆಯ ಹಣವನ್ನು ರಾಜ್ಯದ ರೈತರ ಸಾಲಮನ್ನಾಕ್ಕೆ ಬಳಸುತ್ತಿದ್ದೇನೆ. ಖಜಾನೆಯು ಭರ್ತಿಯಾಗಿದೆ, ಯಡಿಯೂರಪ್ಪ ಅವರು ಆಪಾಧನೆ ಮಾಡುವಂತೆ ಖಜಾನೆಯಲ್ಲಿ ಹಣವು ಖಾಲಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಎಷ್ಟೇ ಅಪಪ್ರಚಾರ ಮಾಡಿಕೊಂಡು ಬೊಬ್ಬೆ ಹಾಕಿದರೂ ಮೈತ್ರಿಕೂಟದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುತ್ತಾರೆ ಎಂಬ ಭರವಸೆ ಇದೆ. ಅಪಪ್ರಚಾರಗಳಿಗೆ ಕಿವಿಗೊಡದೇ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಅಭ್ಯಥಿರ್üಯಾಗಿ ಕಣದಲ್ಲಿರುವ ಮಾಜಿ ಶಾಸಕ, ಜನಪರ ಹೋರಾಟಗಾರ ಎಲ್.ಆರ್.ಶಿವರಾಮೇಗೌಡರ ಭತ್ತದತೆನೆಯ ಹೊರೆಯನ್ನು ಹೊತ್ತಿರುವ ರೈತ ಮಹಿಳೆಯ ಗುರ್ತಿಗೆ ಮತನೀಡಿ ಹರಸಿ ಆಶೀರ್ವದಿಸಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಪ್ರಚಾರ ಸಭೆಯಲ್ಲಿ ರಾಜ್ಯದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಮಂಡ್ಯ ಮತ್ತು ಹಾಸನ ಜಿಲ್ಲೆಗಳೆರಡೂ ದೇವೇಗೌಡರಿಗೆ ಎರಡು ಕಣ್ಣುಗಳಿದ್ದಂತೆ ಮಂಡ್ಯ ಜಿಲ್ಲೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು ಅವರ ಕೋರಿಕೆಯಂತೆ ಶ್ರೀರಂಗಪಟ್ಟಣದಿಂದ ಚನ್ನರಾಯಪಟ್ಟಣದ ವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಜೊತೆಗೆ ಮಂಡ್ಯ ಜಿಲ್ಲೆಗೆ ಪಶುವೈದ್ಯಕೀಯ ಕಾಲೇಜನ್ನು ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ವೇಳೆಯಲ್ಲಿ ಶಾಸಕ ಡಾ.ನಾರಾಯಣಗೌಡ ಅವರು ಮುಖ್ಯಮಂತ್ರಿ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಶಾಸಕ ಸಿ.ಎನ್ ಬಾಲಕೃಷ್ಣ, ಡಾ| ಅನ್ನದಾನಿ, ಕೆ.ಸುರೇಶ್ಗೌಡ, ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಮತ್ತಿತರರು ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಿದ್ದರು.



