ಬಂಟ್ವಾಳ: ಸಂಸ್ಕಾರಗಳೇ ಹಿಂದೂ ಧರ್ಮದ ಜೀವಾಳವಾಗಿದ್ದು, ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸುವಲ್ಲಿ ಮಾತೆಯರ ಪರಿಶ್ರಮ ಅತ್ಯಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.

ಶ್ರೀ ಶಾರದಾ ಸೇವಾಪ್ರತಿಷ್ಠಾನ (ರಿ.) ಕಲ್ಲಡ್ಕ ಹಾಗೂ ಶಾರದಾ ಪೂಜಾ ಉತ್ಸವ ಸಮಿತಿಯ ಆಶ್ರಯದಲ್ಲಿ ಕಲ್ಲಡ್ಕ ಸ.ಹಿ.ಪ್ರಾಶಾಲಾ ಆವರಣದಲ್ಲಿ ಇತ್ತೀಚೆಗೆ ನಡೆದ 41ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಧಾರ್ಮಿಕಸಭೆಯಲ್ಲಿ ಶಾಂತ ಶ್ರೀ ಪ್ರಶಸ್ತಿ ಪ್ರದಾನ ಮಾಡಿ, ಧಾರ್ಮಿಕ ಉಪನ್ಯಾಸ ನೀಡಿದರು. ಹಿಂದೂ ಧರ್ಮದ ಹಬ್ಬ ಹರಿದಿನಗಳ ಮಹತ್ವವನ್ನು ಅರಿತು ಆಚರಿಸಿದಾಗ ಹಬ್ಬಗಳಿಗೆ ಹೆಚ್ಚು ಅರ್ಥ ಬರುತ್ತದೆ ಎಂದವರು ಹೇಳಿದರು.
ಒಡಿಯೂರು ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ನಾಟಕಕಾರ ದಿ.ಶಾಂತಾರಾಮ ಕಲ್ಲಡ್ಕ ಅವರ ನೆನಪಿನಲ್ಲಿ ನೀಡಲಾಗುವ ಶಾಂತ ಶ್ರೀ ಪ್ರಶಸ್ತಿಯನ್ನು ಕಶೆಕೋಡಿ ಸೂರ್ಯನಾರಾಯಣ ಭಟ್ ಅವರಿಗೆ ನೀಡಿ ಗೌರವಿಸಲಾಯಿತು. ದೈವನರ್ತಕ ಲೋಕಯ್ಯ ಶೇರಾ, ಶಾರದಾ ಪೂಜಾ ಉತ್ಸವ ಸಮಿತಿಯ ಅಧ್ಯಕ್ಷ ಚಿದಾನಂದ ಆಚಾರ್ಯ, ತುಳು ಸಿನಿಮಾ ಕಲಾವಿದ ಮಂಜು ರೈ , ಮೇಘರಾಜ್ ಕುಮಾರಿ ವೇದಿಕೆಯಲ್ಲಿ ಶ್ರದ್ಧಾ ಉಪಸ್ಥಿತರಿದ್ದರು.
ಚಂದಪ್ಪ ಹನುಮಾನ್ ನಗರ, ಐತಪ್ಪ ಭಂಡಾರಿ , ರಮೇಶ್ ಮಾಸ್ಟರ್ ರವರನ್ನು ಗ್ರಾಮ ಗೌರವದ ಮೂಲಕ ಗೌರವಿಸಲಾಯಿತು. ಕುಮಾರಿ ಹರ್ಷಿಕ ರಾಯಪ್ಪ , ಕುಮಾರಿ ತೇಜ. ಜೆ. ಶೆಟ್ಟಿ, ಕುಮಾರಿ ಯಶಸ್ವಿ .ಕೆ. ಕಡೇಶಿವಾಲಯ, ಶ್ರೀಅಭಿಷೇಕ್ ಜೆ ಕೊಟ್ಟಾರಿರವರಿಗೆ ಪ್ರತಿಭಾ ಪುರಸ್ಕಾರನೀಡಿ ಅಭಿನಂದಿಸಲಾಯಿತು. ಪ್ರತಿಷ್ಠಾನದ ಕಾರ್ಯದರ್ಶಿ ಚಿ.ರಮೇಶ್ ಕಲ್ಲಡ್ಕ ಸ್ವಾಗತಿಸಿದರು. ಅಧ್ಯಕ್ಷ ನರಸಿಂಹ ಮಡಿವಾಳ ಪ್ರಸ್ತಾವನೆಗೈದರು. ಗೋಪಾಲ್ ಕಲ್ಲಡ್ಕ ವಂದಿಸಿದರು . ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಸತೀಶ್, ವಜ್ರನಾಥ ಕಲ್ಲಡ್ಕ. ಯತೀನ ಕುಮಾರ್ ಏಳ್ತಿಮಾರ್, ದಿನೇಶ್ ಮೊದಲಾದವರು ಸಹಕರಿಸಿದರು.
