ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್, ತಹಶೀಲ್ದಾರರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಆರಕ್ಷಕ ಠಾಣೆ, ಪುರಸಭೆ, ಪ್ರೆಸ್ಕ್ಲಬ್ ಮೂಡಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಮೂಡಬಿದಿರೆಯಲ್ಲಿ ನಡೆದ 5ನೇ ವರ್ಷದ ಬೃಹತ್ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಪರಿಸರ ಸ್ವಚ್ಛತೆಯ ಜೊತೆಗೆ ವ್ಯಕ್ತಿತ್ವದ ಸ್ವಚ್ಛತೆಯೂ ಬಹುಮುಖ್ಯ. ಭ್ರಷ್ಟಾಚಾರ ರಹಿತ ಭಾರತ ನಿರ್ಮಾಣಕ್ಕೆ ಇದು ಪೂರಕ ಎಂದು ಹೇಳಿದರು.
ರೋಟರಿ ಟೆಂಪಲ್ಟೌನ್ ಅಧ್ಯಕ್ಷ ವಿನ್ಸೆಂಟ್ ಡಿ’ಕೋಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಜಿ.ಪಂ. ಸದಸ್ಯ, ಕೆ.ಎಂ.ಎಫ್. ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ತಹಸೀಲ್ದಾರ್ ಮಹೇಶ್ಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ರವೀಂದ್ರ ಸುವರ್ಣ, ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ಎಸ್., ಮೂಡುಬಿದಿರೆ ಪ್ರೆಸ್ಕ್ಲಬ್ ಅಧ್ಯಕ್ಷ ಜೈಸನ್ ತಾಕೋಡೆ ಉಪಸ್ಥಿತರಿದ್ದರು.
ಇದೇ ವೇಳೆ ಸನ್ಮಾನ ಕಾರ್ಯಕ್ರಮವು ನಡೆಯಿತು. ಪೌರ ಕಾರ್ಮಿಕರಾದ ಬೊಗ್ಗು, ಮಹಾಂತೇಶ ನಾಯ್ಕ, ಕಮಲಿ ಬಾಯಿ, ಸಂದೀಪ್, ರಾಜು ಕಡೆಪಲ್ಲ, ಜಗದೀಶ ಮತ್ತು ವಾಹನ ಚಾಲಕ ದಾಮೋದರ ಅವರನ್ನು ಸಮ್ಮಾನಿಸಲಾಯಿತು.
ರೋಟರಿ ಕ್ಲಬ್ ಸುವರ್ಣ ಮಹೋತ್ಸವ ವರ್ಷ (2017-18)ದ ಅಧ್ಯಕ್ಷ ಶ್ರೀಕಾಂತ ಕಾಮತ್, ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ 117ಕ್ಕೂ ಮಿಕ್ಕಿ ಫಲಾನುಭವಿಗಳಿಗೆ ಉಚಿತ ಶೌಚಾಲಯ ನಿರ್ಮಿಸುವಲ್ಲಿ , 2 ಕೆರೆಗಳಿಗೆ ಕಾಯಕಲ್ಪ ನೀಡುವಲ್ಲಿ ಶ್ರಮಿಸಿರುವ ಡಾ.ಮುರಳೀಕೃಷ್ಣ ಹಾಗೂ ಕ್ಲೀನ್ ಅಪ್ ಮೂಡುಬಿದಿರೆ ಸ್ವಚ್ಛತಾ ಅಭಿಯಾನವನ್ನು ನೂರಾರು ಕಾರ್ಯಕರ್ತರ ಜೊತೆ ಸೇರಿ ಸಂಘಟಿಸುತ್ತಿರುವ ಜವನೆರ್ ಬೆದ್ರ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಅವರನ್ನು ಪುರಸ್ಕರಿಸಲಾಯಿತು.
ಕಾಐಕ್ರಮವನ್ನು ರೋಟರಿ ಟೆಂಪಲ್ ಟೌನ್ ನಿಕಟಪೂರ್ವ ಅಧ್ಯಕ್ಷ ಉಮೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಡೆನಿಸ್ ಪಿರೇರಾ ವಂದಿಸಿದರು. ಧೀರೇಂದ್ರಜೈನ್ ನಿರೂಪಿಸಿದರು.
ಕಾಲೇಜಿನ ಅಧಿಕ ವಿದ್ಯಾರ್ಥಿಗಳು ಭಾಗಿ:
ಮೂಡುಬಿದಿರೆಯ 8 ತಾಣಗಳಿಂದ ಹೊರಟ ಸ್ವಚ್ಚತಾಂದೋಲನ ಜಾಥಾದಲ್ಲಿ ವಿವಿಧ ವಿದ್ಯಾಸಂಸ್ಥೆಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸ್ವಚ್ಛತೆ, ಪ್ಲಾಸ್ಟಿಕ್ ವಿರೋಧಿ ಘೋಷವಾಕ್ಯಗಳ ಫಲಕಗಳನ್ನು ಹಿಡಿದುಕೊಂಡು, ಬ್ಯಾಂಡ್ ವಾದನದೊಂದಿಗೆ ಪಾಲ್ಗೊಂಡರು. ವಿವಿಧ ತಂಡಗಳಲ್ಲಿದ್ದ ವಿದ್ಯಾರ್ಥಿಗಳು ತಾವು ಹಾದು ಬಂದ ಹಾದಿಯ ಸುತ್ತಮುತ್ತ ಕಸ ಹೆಕ್ಕುತ್ತ, ಸ್ವರಾಜ್ಯ ಮೈದಾನದತ್ತ ಬಂದು ಪುರಸಭಾ ತ್ಯಾಜ್ಯಸಂಗ್ರಹಣ ವಾಹನಕ್ಕೆ ಒಪ್ಪಿಸಿದರು.
