ಮೂಡುಬಿದಿರೆ: ‘ತಾಕೊಡೆಯ ಕರಿಂಜೆ ಸೇವಾ ಸಹಕಾರಿ ಸಂಘವು 2017-18ನೇ ಸಾಲಿನಲ್ಲಿ 58.93 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, 21 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ 12% ಡಿವಿಡೆಂಟ್ ನೀಡಲಾಗುತ್ತದೆ’ ಎಂದು ಬ್ಯಾಂಕಿನ ಅಧ್ಯಕ್ಷ ಜೆರಾಲ್ಡ್ ಮೆಂಡಿಸ್ ಅವರು ಹೇಳಿದರು.

ಸಂಘದ ಸಭಾಭವನದಲ್ಲಿ ಶನಿವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

Karinje Bank Mahasabhe
‘ಕರಿಂಜೆ ಸೇವಾ ಸಹಕಾರಿಯು ಪ್ರಾಮಾಣಿಕ ಸೇವೆಯಿಂದ ಜನರ ವಿಶ್ವಾಸ ಗಳಿಸಿದ್ದು, ರೈತಸ್ನೇಹಿಯಾಗಿ ಕೃಷಿಕರಿಗೆ ಅನುಕೂಲವಾಗುವ ಸರಕಾರದ ಯೋಜನೆಗಳನ್ನು ನಿರಂತರವಾಗಿ ತಲುಪಿಸುತ್ತಿದೆ. 16 ವರ್ಷಗಳ ಕಾಲ ಬ್ಯಾಂಕಿನ ಅಧ್ಯಕ್ಷನಾಗಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ’ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫ್ರಾನ್ಸಿಸ್ ಮೆಂಡೋನ್ಸಾ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ, ನಿವ್ವಳ ಲಾಭದ ವಿಂಗಡಣೆ, 2018-19ನೇ ಸಾಲಿನ ಬಜೆಟ್ ಮಂಡಿಸಿ, ಬಜೆಟಿಗಿಂತ ಜಾಸ್ತಿ ಖರ್ಚಾದ ಮೊತ್ತಕ್ಕೆ ಮಂಜೂರಾತಿ ಪಡೆದರು. ಮುಂದಿನ ಸಾಲಿಗೆ ಸಿಎ ಮೆಂಡಿಸ್ & ಕಂ. ಮಂಗಳೂರು ಇವರನ್ನು ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಲಾಯಿತು. ಸಂಘದ ಉಪನಿಯಮಗಳ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀನಿವಾಸ ಆಳ್ವ, ವಲೇರಿಯನ್ ಡಿಮೆಲ್ಲೊ, ಫ್ಲೊಸ್ಸಿ ಪಾವ್ಲಿನ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಆಳ್ವ ಅವರು ‘ಪ್ರಕೃತಿಗೆ ಪೂರಕವಾಗಿಯೇ ಕೃಷಿ ಮಾಡಬೇಕೇ ವಿನಃ, ಪ್ರಕೃತಿಗೆ ವಿರುದ್ಧ ಹೋಗುವುದು ಸರಿಯಲ್ಲ. ಇಷ್ಟು ಸಣ್ಣ ಊರಿನಲ್ಲಿ ಸಂಘ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಸಹಕಾರಿ ರಂಗದ ಶಕ್ತಿ ಏನೆಂಬುದನ್ನು ತೋರಿಸಿಕೊಡುತ್ತಿದೆ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆರೋಗ್ಯ ಕರ್ನಾಟಕ ಯೋಜನೆ, ಸರಕಾರದ ಸಾಲಮನ್ನಾ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರದೀಪ್ ಜಾಯ್ ಡಿಸಿಲ್ವಾ ಅವರು ತೋಟಗಾರಿಕಾ ಇಲಾಖೆಯ ಸೌಲಭ್ಯಗಳು, ಹನಿ ನೀರಾವರಿ, ಯಾಂತ್ರೀಕರಣ ಯೋಜನೆ, ಬಾಳೆ ಕಾಳುಮೆಣಸು ತೋಟ ರಚನೆ ಮತ್ತು ಪುನಶ್ಚೇತನ ಯೋಜನೆ, ಸಂರಕ್ಷಿತ ಬೇಸಾಯ ಯೋಜನೆ, ಬೆಳೆ ವಿಮೆ ಮತ್ತು ಬೆಳೆ ಸಮೀಕ್ಷೆ, ಜೇನು ಕೃಷಿ ಸಂಬಂಧಿ ಮಾಹಿತಿ ನೀಡಿದರು.
ನಿರ್ದೇಶಕರಾದ ಎಡ್ವಿನ್ ಡಿಸೋಜಾ, ಜಾನ್ ಬ್ಯಾಪ್ಟಿಸ್ಟ್ ಮೆಂಡೋನ್ಸಾ, ಶೇಖರ ಎಂ., ಜೆಸಿಂತಾ ಲೋಬೊ, ಪುಷ್ಪಾವತಿ, ಶಾಖಾ ವ್ಯವಸ್ಥಾಪಕಿ ಗುಣವತಿ, ಲೆಕ್ಕಿಗ ರಾಜೀವಿ ಸಾಲಿಯಾನ್, ಸಿಬ್ಬಂದಿ ಹೆಲ್ಸನ್ ಮೆಂಡೋನ್ಸಾ ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕ ಅಶ್ವಿನ್ ಜೊಸ್ಸಿ ಪಿರೇರಾ ಸ್ವಾಗತಿಸಿದರು. ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ವಂದಿಸಿದರು. ನಿರ್ದೇಶಕರಾದ ಪಾವ್ಲ್ ಡಿಸೋಜಾ, ಜೋನ್ ರೇಗೊ, ಮೆಲ್ವಿನ್ ಡಿಕೋಸ್ತಾ ಸನ್ಮಾನಿತರ ವಿವರ ವಾಚಿಸಿದರು.

By suddi9

Leave a Reply

Your email address will not be published. Required fields are marked *