ಕೈಕಂಬ: ಮಗು ಹಾಗೂ ಪತ್ನಿಯನ್ನು ಬಿಟ್ಟು ವ್ಯಕ್ತಿಯೊಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಪಡೆದಿದ್ದು, ಇವರ ಮೃತದೇಹ ತಮಿಳುನಾಡಿನ ಕೇನಿ ಜಿಲ್ಲೆಯ ದೇವತಾನಪಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡಪ್ರದೇಶವೊಂದರಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ದೃಢೀಕರಣಕ್ಕಾಗಿ ಪೊಲೀಸರು ಹಾಗೂ ಮೃತನ ಕಟುಂಬಿಕರು ತಮಿಳುನಾಡಿಗೆ ತೆರಳಿದ್ದಾರೆ.
ಗಂಜಿಮಠದ ಬಡಗುಳಿಪಾಡಿ- ಜೆ.ಎಂ. ರೋಡ್ ನಿವಾಸಿ ಅಹಮ್ಮದ್ ಸಾಹೇಬ್ ಎಂಬವರ ಪುತ್ರ ಮಹಮ್ಮದ್ ಸಮೀರ್(35) ಅವರು, ಸೆ.13ರಂದು ತನ್ನ ಪತ್ನಿ ಹಾಗೂ ಮೂರು ತಿಂಗಳ ಮಗುವನ್ನು ಕರೆದುಕೊಂಡು, ಬೆಂಗಳೂರಿನಲ್ಲಿ ಸಂದರ್ಶನ ಇದೆ ಎಂದು ತಿಳಿಸಿ ಮಂಗಳೂರು ವಿಮಾನ ನಿಲ್ದಾಣದ ಮುಖಾಂತರ ಬೆಂಗಳೂರಿಗೆ ತೆರಳಿದ್ದರು. ಸೆ.15ರಂದು ತನ್ನ ತಾಯಿಗೆ ಕರೆ ಮಾಡಿ, ತಾನು ಬೆಂಗಳೂರಿನಲ್ಲಿ ಇರುವುದಾಗಿ ತಿಳಿಸಿದ್ದು, ಆ ಬಳಿಕ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲ.
ಆದರೆ ಸೆ.18ರಂದು ಈತನ ಪತ್ನಿ ತನ್ನ ಮಗುವಿನೊಂದಿಗೆ ತನ್ನ ತಂದೆಯ ಮನೆಯಾದ ಕಾಪುವಿಗೆ ಬಂದಿದ್ದರು. ಈಕೆಯನ್ನು ವಿಚಾರಿಸಿದಾಗ, ಸಮೀರ್ ಬೇರೆ ಹುಡುಗಿಯ ಸಂಪರ್ಕದಲ್ಲಿದ್ದು, ತನ್ನನ್ನು ಹಾಗೂ ಮಗುವನ್ನು ಕಾಪುವಿನಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದರು. ಸಂಶಯಗೊಂಡ ಅಹಮ್ಮದ್ ಸಾಹೇಬ್ ಬಜ್ಪೆ ಠಾಣೆಗೆ ದೂರು ನೀಡಿದ್ದರು.
ಆದರೆ ಭಾನುವಾರ ತಮಿಳುನಾಡಿನ ಕೇನಿ ಜಿಲ್ಲೆಯ ದೇವತಾನಪಟ್ಟಿ ಠಾಣಾ ವ್ಯಾಪ್ತಿಯ ಗುಡ್ಡ ಪ್ರದೇಶದಲ್ಲಿ ಮೃತದೇಹ ದೊರಕಿತ್ತು. ಈ ಬಗ್ಗೆ ಮಾಹಿತಿ ಪಡೆದ ನಾಪತ್ತೆಯಾದ ವ್ಯಕ್ತಿಯ ಸಂಬಂಧಿಯೊಬ್ಬರು ಪರಿಶೀಲನೆ ನಡೆಸಿ ವಾಚ್ ಹಾಗೂ ಶೂ ಆಧಾರದಲ್ಲಿ ಸಮೀರ್ ಇರಬಹುದೆಂದು ಶಂಕಿಸಿದ್ದಾರೆ. ಮೃತದೇಹದಲ್ಲಿ ಗಾಯದ ಗುರುತು ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಕೊಲೆ ನಡೆಸಿರುವ ಶಂಖೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಬಜಪೆ ಪೊಲೀಸರು ಹಾಗೂ ಕುಟುಂಬಿಕರು ತಮಿಳುನಾಡಿನತ್ತ ಪ್ರಯಾಣಿಸಿದ್ದಾರೆ ಎಂದು ಹೇಳಲಾಗಿದೆ. ಮೃತದೇಹ ಸಿಕ್ಕಿದ್ದು ನಿಜವಾದರೂ, ಪೋಸ್ಟ್ ಮಾರ್ಟಂನಿಂದ ರಿಪೋರ್ಟ್ ವರದಿ ಬಂದ ಬಳಿಕ ಅಧಿಕೃತವಾಗಿ ಮೃತದೇಹದ ಬಗ್ಗೆ ಹೇಳಲು ಸಾಧ್ಯ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
