ಮೂಡುಬಿದಿರೆ: ಹಿಂದಿ ಭಾಷೆಯು ಜನರನ್ನು ಒಂದುಗೂಡಿಸುತ್ತದೆ ಹೊರತು ಬೇರ್ಪಡಿಸುವುದಿಲ್ಲ. ಯಾವುದೇ ಭಾಷೆಯನ್ನು ಪ್ರೀತಿಯಿಂದ ಕಲಿತು ಅದರಲ್ಲಿ ನಿರರ್ಗಳತೆಯನ್ನು ಹೊಂದುವುದರಿಂದ ಮನುಷ್ಯತ್ತ್ವ ಬೆಳೆಯುತ್ತದೆ ಎಂದು ಎಸ್. ಡಿ. ಎಂ ಕಾಲೇಜಿನ ಹಿಂದಿ ವಿಭಾಗದ ಉಪನ್ಯಾಸಕ ಸುನೀಲ್ ಪಂಡಿತ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಿಂದಿ ವಿಭಾಗವು ಆಯೋಜಿಸಿದ್ದ ಹಿಂದಿ ದಿವಸ್ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ತಮ್ಮತನ ಕಡಿಮೆಯಾಗಿ ಸ್ವಾರ್ಥಿಗಳಾಗುತ್ತಿದ್ದಾರೆ. ಆದ್ದರಿಂದ ಮನುಷ್ಯತ್ತ್ವ ಬೆಳೆಯಲು ಭಾಷೆಗಳು ಪೂರಕವಾಗಿವೆ. ವ್ಯಕ್ತಿಯ ಬರವಣಿಗೆಯ ಮೂಲಕ ವ್ಯಕ್ತಿತ್ತ್ವವನ್ನು ತಿಳಿದುಕೊಳ್ಳಬಹುದು. ಎಲ್ಲರಿಗೂ ಗೊತ್ತಿರುವಂತಹ ಭಾಷೆ ಹಿಂದಿಯಾಗಿರುವುದರಿಂದ 1947ರಲ್ಲಿ ಗಾಂಧೀಜಿಯವರು ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದರು. ನೆಹರು ಅವರು ಪ್ರಧಾನಮಂತ್ರಿಯಾದ ಸಮಯದಲ್ಲಿ ಸಂಸತ್ತು ಸೆಪ್ಟೆಂಬರ್ 22ಕ್ಕೆ ಹಿಂದಿ ದಿವಸ್ನ್ನು ಆಚರಿಸಬೇಕೆಂಬ ತೀರ್ಮಾನವನ್ನು ತೆಗೆದುಕೊಂಡಿತು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಾವು ಎಲ್ಲಾ ಭಾಷೆಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು ಹಾಗೂ ಅವುಗಳನ್ನು ಕಲಿಯುವ ಪ್ರಯತ್ನ ಮಾಡಬೇಕು. ರಾಷ್ಟ್ರ ಭಾಷೆಯಾದ ಹಿಂದಿಗೆ ಎಲ್ಲರೂ ಗೌರವವನ್ನು ನೀಡಬೇಕು. ರಾಷ್ಟ್ರಭಾಷೆಯನ್ನು ಗೌರವಿಸುವ ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ವಿನೂತನವಾಗಿ ಆಯೋಜಿಸಿ ಯಶಸ್ವಿಗೊಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆಯೋಜಿಸದ್ದ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಭಾಷಾ ವಿಭಾಗದ ಡೀನ್ ಡಾ| ರಾಜೀವ್, ಅಲ್ಯುಮ್ನಿ ಅಸ್ಸೋಸಿಯೇಟ್ಸ್ ಜಾನ್ಸನ್ ಮತ್ತು ವಿಲ್ಸನ್ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
