ಬಂಟ್ವಾಳ: ವೈದ್ಯರ ಮತ್ತು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಬಲಿಯಾಗಿದ್ದ ಗರ್ಭಿಣಿ ಮತ್ತು ಮಗುವಿನ ವಾರಿಸುದಾರರಿಗೆ 18.12 ಲಕ್ಷ ರೂ. ಪರಿಹಾರ ನೀಡುವಂತೆ ಮಂಗಳೂರಿನ ಗ್ರಾಹಕರ ನ್ಯಾಯಾಲಯವು ಆದೇಶಿಸಿದೆ. 2014 ರ ಫೆ.6 ರಂದು ಬಿ.ಸಿ.ರೋಡಿನ ಬೈಪಾಸ್ ರಸ್ತೆಯ ಸರಕಾರಿ ನೌಕರರ ಕಾಲೊನಿ ನಿವಾಸಿ ನವೀನ್ ಕುಮಾರ್ ಅವರ ಪತ್ನಿ ಚಂಚಲಾಕ್ಷಿ ಯವರು ಎರಡನೇ ಹೆರಿಗೆಗಾಗಿ ಬಿ.ಸಿ.ರೋಡಿನ ಪ್ರಸೂತಿ ತಜ್ಙೆ ಯೊಬ್ಬರ ನಿರ್ದೇಶನದಂತೆ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು.
ಆದರೆ ಆಸ್ಪತ್ರೆಯ ವೈದ್ಯರು ಸಮಯಕ್ಕೆ ಸರಿಯಾಗಿ ಬಾರದೆ ಮತ್ತು ಅಲ್ಲಿನ ಸಿಬಂದಿಗಳ ನಿರ್ಲಕ್ಷ್ಯದಿಂದ ಸಂಜೆಯ ಹೊತ್ತಿಗೆ ಯಾವುದೋ ಚುಚ್ಚುಮದ್ದು ನೀಡಿದ ಕಾರಣ ಚಂಚಲಾಕ್ಷಿಯವರ ಸ್ಥಿತಿ ಬಿಗಡಾಯಿಸಿತ್ತು. ಬಳಿಕ ಆಸ್ಪತ್ರೆಗೆ ಬಂದ ವೈದ್ಯೆಯರಾದ ಡಾ.ಭಾರತಿ ಶೆಟ್ಟಿ,ಡಾ.ಶಶಿಕಲಾ ಅವರು ಚಂಚಲಾಕ್ಷಿಯವರ ಗಂಬೀರಾವಸ್ಥೆಯನ್ನು ಪರಿಶೀಲಿಸಿ ಅವರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗೆ ಅಂಬುಲೆನ್ಸ್ ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆದರೆ ಇಲ್ಲಿ ತಲುಪುತ್ತಿದ್ದಂತೆ ಚಂಚಲಾಕ್ಷಿ ಮತ್ತು ಅವರ ಹೊಟ್ಟೆಯಲ್ಲಿದ್ದ 9 ತಿಂಗಳು ತುಂಬಿದ ಮಗು ಕೂಡ ಮೃತಪಟ್ಟಿದ್ದರು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೇಸು ಕೂಡ ದಾಖಲಾಗಿತ್ತು.ಅಲ್ಲದೆ ಅಗಿನ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಅವರ ನಿರ್ದೇಶನದಂತೆ ಉನ್ನತಮಟ್ಟದ ತನಿಖೆ ಕೂಡ ನಡೆದಿತ್ತು. ಈ ನಡುವೆ ಮೃತರ ಪತಿ ನವೀನ್ ಮತ್ತು ಮಗ ಅದಿತ್ಯ ದ.ಕ.ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಆಸ್ಪತ್ರೆ ಮತ್ತು ವೈದ್ಯರ ವಿರುದ್ದ ದಾವೆ ಹೂಡಿದ್ದರು.ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಮೃತರ ಕುಟಿಂಬಕ್ಕೆ 18.12 ಲಕ್ಷ ರೂ.ಮೊತ್ತ ಬಡ್ಡಿ ಮತ್ತು ಖರ್ಚು ಸಹಿತವಾಗಿ ನೀಡುವಂತೆ ಆದೇಶಿಸಿದೆ. ನವೀನ್ ಕುಮಾರ್ ಪರವಾಗಿ ಮಂಗಳೂರಿನ ನ್ಯಾಯವಾದಿ ಉದಯಾನಂದ ಎ.ವಾದಿಸಿದ್ದರು.
