ಮೂಡುಬಿದಿರೆ: ಕೆಸರಗದ್ದೆಯಲ್ಲಿ 800 ಮಂದಿ ವಿದ್ಯಾರ್ಥಿಗಳಿಂದ ಆಟೋಟ. ಕೃಷಿ ಚಟುವಟಿಕೆಗಳ ನೋಟ. ವಿದ್ಯಾರ್ಥಿಗಳಿಗೆ ಗದ್ದೆಯಲ್ಲೇ ಕೃಷಿ ಪಾಠ. ಇಂತಹದೊಂದು ಸನ್ನಿವೇಶವನ್ನು ಕಟ್ಟಿಕೊಟ್ಟದ್ದು, ರೋಟರಿ ಎಜ್ಯುಕೇಶನ್ ಸೊಸೈಟಿ ಹಾಗೂ ರೋಟರಿ ಕ್ಲಬ್, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಹಾಗೂ ಮೂಡುಬಿದಿರೆ ಪ್ಲೆಸ್ಕ್ಲಬ್.
`ಗದ್ದೆಯೆಡೆಗೆ ಮಕ್ಕಳ ಹೆಜ್ಜೆ’ ಎನ್ನುವ ಪರಿಕಲ್ಪನೆಯೊಂದಿಗೆ ದೊಡ್ಮನೆರಸ್ತೆ ತೋಟಮನೆಯ ಗದ್ದೆಯಲ್ಲಿ ಆಯೋಜಿಸಲಾದ ಗ್ರಾಮೀಣ ಆಟೋಟ ಸ್ಪರ್ಧೆಯನ್ನು ಮೂಡುಬಿದಿರೆ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಉದ್ಘಾಟಿಸಿದರು. ನಮಗೆ ಬದುಕಬೇಕಾದರೆ ಆಹಾರ ಮುಖ್ಯ. ಕೃಷಿ ನಮಗೆ ಆಹಾರಕ್ಕೆ ಮಾತ್ರವಲ್ಲ ಅದು ನಮ್ಮ ಸಂಸ್ಕøತಿ. ಉತ್ತಮ ಆಹಾರ, ನಮ್ಮ ಸಂಸ್ಕøತಿ ಮುಂದೆ ಕೂಡ ಸಿಗಬೇಕಾದರೆ ಯುವಜನತೆ ಕೃಷಿಯತ್ತ ಬರಬೇಕು. ಗದ್ದೆಯೆಡೆಗಿನ ಹೆಜ್ಜೆ ಕೃಷಿಯ ಜೊತೆ ಯುವಜನರ ನಂಟನ್ನು ಬೆಸೆಯುತ್ತದೆ ಎಂದರು.
ರೋಟರಿ ಎಜ್ಯುಕೇಶನ್ ಸೊಸೈಟಿ ಸಂಚಾಲಕ ಡಾ.ಯತಿಕುಮಾರ್ ಸ್ವಾಮಿ ಗೌಡ ಅಧ್ಯಕ್ಷತೆವಹಿಸಿದ್ದರು. ರೋಟರಿ ನಿಯೋಜಿತ ಅಧ್ಯಕ್ಷ ಡಾ.ರಮೇಶ್, ಮೂಡುಬಿದಿರೆ ಪ್ರೆಸ್ಕ್ಲಬ್ ಅಧ್ಯಕ್ಷ ಜೈಸನ್ ತಾಕೋಡೆ, ಪುರಸಭಾ ಪರಿಸರ ಅಧಿಕಾರಿ ಶಿಲ್ಪಾ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಬಲರಾಮ್, ಗದ್ದೆಯ ಯಜಮಾನ ಓಮಯ್ಯ ಪೂಜಾರಿ, ರೋಟರಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ, ಆಡಳಿತಾಧಿಕಾರಿ ಶುಭಕರ ಅಂಚನ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ದಿವ್ಯಾ ಕಾರ್ಯಕ್ರಮ ನಿರೂಪಿಸಿದರು. ಕಂಬಳ ಹಾಗೂ ನಾಟಿ ಪ್ರಾತ್ಯಕ್ಷಿಕೆ ನಡೆಯಿತು.









