ಕುಪ್ಪೆಪದವು: ಬಜಪೆ ಠಾಣಾ ವ್ಯಾಪ್ತಿಯ ಮಳಲಿ ಬಾಕಿಮಾರ್ ವಿವಾಹಿತನೊರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಮಳಲಿ ಬಾಕಿಮಾರ್ ನಿವಾಸಿ ಮೋನಮ್ಮ ಎಂಬವರ ಪುತ್ರ ಮುಕುಂದ ಕುಲಾಲ್(45) ಎಂದು ಗುರುತಿಸಲಾಗಿದೆ.

ಎಲೆಕ್ಟ್ರಿಷಿಯನ್ ವೃತ್ತಿ ಮಾಡಿಕೊಂಡಿದ್ದ ಇವರು ಬುಧವಾರ ಬೆಳಗ್ಗಿನ ಜಾವ ಮಕ್ಕಳನ್ನು ಶಾಲೆಗೆ ಕಳುಹಿಸಿ ಮನೆಯಿಂದ ತೆರಳಿದ್ದರು. ಅವರ ಪತ್ನಿ ಕರೆ ಮಾಡಿದಾಗ ಕರೆ ಸ್ವೀಕರಿಸದಿರುವುದರಿಂದ ಅನುಮಾನಗೊಂಡು ಹಳೆ ಮನೆಯಲ್ಲಿ ಹುಡುಕಾಡಿದಾಗ ಬಚ್ಚಲು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ದೊರಕಿ ನೂರಾರು ಮಂದಿ ಜಮಾಯಿಸಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಶವದ ಮಹಜರು ನಡೆಸಿದರು. ಗಂಜಿಮಠ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪತ್ನಿ ಶಶಿಕಲಾ ಅವರ ದೂರಿನಂತೆ ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು?
ಮುಕುಂದ ಅವರು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನುವುದು ಇನ್ನಷ್ಟೇ ತಿಳಿದುಬರಬೇಕಾಗಿದೆ. ಕಳೆದ ಎರಡು ವರ್ಷಗಳ ಮುಂಚೆ ಅವರ ಹಳೆಮನೆಯ ವಿಚಾರಲ್ಲಿ ಕೋರ್ಟ್ನಲ್ಲಿ ವ್ಯಾಜ್ಯ ನಡೆದಿತ್ತು. ಆದರೆ ಕೋರ್ಟು ತೀರ್ಪು ಮುಕಂದರವರ ವಿರುದ್ಧವಾಗಿ ಬಂದು ತನ್ನ ದೊಡ್ಡ ಹಳೆಮನೆಯು ಪ್ರತಿವಾದಿಗಳ ಕೈಸೇರಿತ್ತು. ಇದಾದ ಬಳಿಕ ಹಳೆ ಮನೆಯ ಸ್ವಲ್ಪ ದೂರದಲ್ಲಿ ಜಾಗವನ್ನು ಖರೀದಿಸಿ ಮನೆಯೊಂದನ್ನು ಕಟ್ಟಿಕೊಂಡು ಆರು ತಿಂಗಳ ಹಿಂದೆಯಷ್ಟೇ ಗೃಹಪ್ರವೇಶ ಇಟ್ಟುಕೊಂಡಿದ್ದರು. ಎಲೆಕ್ಟ್ರಿಷಿಯನ್ ವೃತ್ತಿ ಮಾಡಿಕೊಂಡು ಚೆನ್ನಾಗಿದ್ದರೂ ಇತ್ತೀಚೆಗೆ ಕೆಲಸ ಕಡಿಮೆ ಇದ್ದ ಕಾರಣ ಚಿಂತಿತರಾಗಿದ್ದರು ಎಂದು ಅವರ ಪರಿಚಯಸ್ಥರು ಮಾಹಿತಿ ನೀಡಿದ್ದಾರೆ.ಇದರಿಂದಾಗಿ ಮುಕುಂದ ಅವರು ಖಿನ್ನತೆಗೆ ಒಳಗಾಗಿದ್ದಾರೆಎಂದು ತಿಳಿದು ಬಂದಿದೆ.

