ವಾಮಂಜೂರು : ಇಲ್ಲಿಗೆ ಸಮೀಪದ ತಿರುವೈಲು ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾಮಗಾರಿಗಾಗಿ ಶಾಲೆಗೆ ದಾನಿಗಳಿಂದ ಪಡೆದು ಕುಟ್ಟಿಪಲ್ಕೆ ಎಂಬಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 35 ರಷ್ಟು ಲೋಡ್ ಮರಳು ಜಪ್ತಿಮಾಡಿದ ಮರಳನ್ನು ಸಾಗಾಟ ಪ್ರಕ್ರಿಯೆಗೆ ಸ್ಥಳೀಯರು ತಡೆಯೊಡ್ಡಿ, ಶಾಲಾ ಆವರಣದಲ್ಲಿ ಮರಳು ಅನ್ಲೋಡ್ ಮಾಡಲಾದ ಘಟನೆ ಮಂಗಳವಾರ ನಡೆಯಿತು.ಪ್ರತಿಭಟನೆಗೆ ಮಣಿದ ಇಲಾಖಾ ಸಿಬ್ಬಂದಿ ಕೆಲವು ತಾಸಿನ ಬಳಿಕ ಎರಡು ಲಾರಿಯಲ್ಲಿ ತುಂಬಿಡಲಾಗಿದ್ದ ಮರಳನ್ನು ಶಾಲೆಯ ಆವರಣದಲ್ಲಿ ಖಾಲಿ ಮಾಡಿಸಿದರು.
ಗಣಿ ಇಲಾಖೆಯ ಲಾರಿಗಳು ಜೆಸಿಬಿಯೊಂದಿಗೆ ಕುಟ್ಟಿಪಲ್ಕೆಗೆ ಆಗಮಿಸಿ, ಮರಳು ಲೋಡ್ ಮಾಡಲಾರಂಭಿಸಿದಾಗ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಘು ಸಾಲ್ಯಾನ್ ಹಾಗೂ ಊರಿನವರು ತಡೆದು ದಾಖಲೆ ಪ್ರಶ್ನಿಸಿದರು.ಇಲಾಖೆಯ ಸೂಚನೆ ಮೇರೆಗೆ ಮಳಲಿ ಯಾರ್ಡಿಗೆ ಜಪ್ತಿ ಮಾಡಲಾದ ಮರಳು ಸಾಗಿಸುತ್ತೇವೆ ಎಂದು ಸಿಬ್ಬಂದಿ ಹೇಳಿದರು. ಆದರೆ ಅದಕ್ಕೆ ಸೂಕ್ತ ಆದೇಶಪತ್ರ ಹೊಂದಿರದ ಸಿಬ್ಬಂದಿ, ಯಾರ್ಡಿನಿಂದ ಮರಳು ಎಲ್ಲಿಗೆ ರವಾನೆಯಾಗುತ್ತದೆ ಎಂದು ಪ್ರಶ್ನಿಸಿದಾಗ ನಿರುತ್ತರರಾದರು.ಕಳೆದ ಬಾರಿ ಮೂಡುಶೆಡ್ಡೆ ಮತ್ತು ಮಳವೂರಿನಲ್ಲಿ ಜಪ್ತಿ ಮಾಡಲಾದ ಸಾವಿರಾರು ಟ್ರಕ್ ಲೋಡ್ ಮರಳು ಮೂಡುಶೆಡ್ಡೆ ಯಾರ್ಡಿಂದ ಎಲ್ಲಿಗೆ ಹೋಗಿದೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಸ್ಥಳೀಯರು ಆರೋಪಿಸಿದರು.
ಮೊನ್ನೆ ಧಾರಾಕಾರ ಮಳೆ ಸುರಿಯುತ್ತಿದ್ದಾಗಲೇ ಗಣಿ ಇಲಾಖೆಯವರು ಮನಪಾ ತಿರುವೈಲು ವಾರ್ಡ್ ವ್ಯಾಪ್ತಿಯ ದೇವರಪದವಿನಲ್ಲಿ ಜಪ್ತಿ ಮಾಡಲಾದ ನೂರಾರು ಲೋಡ್ ಮರಳು ಸಾಗಾಟ ಮಾಡಿದ್ದರಿಂದ ಅಲ್ಲಿನ ರಸ್ತೆ ಸಂಪೂರ್ಣ ಜರ್ಜರಿತಗೊಂಡಿದೆ. ಗಣಿ ಇಲಾಖೆ ಮತ್ತು ಪೊಲೀಸರಿಗೆ ಸಮಸ್ಯೆ ದೂರಿಕೊಂಡರೂ ಯಾವುದೇ ಪರಿಣಾಮವಾಗಿಲ್ಲ. ಈಗ ಇಲ್ಲಿ ರಾಶಿ ಹಾಕಲಾದ ಶಾಲೆಗೆ ಸಂಬಂಸಿದ ಮರಳು ಕೊಂಡೊಯ್ಯಲು ಮುಂದಾಗಿರುವ ಇಲಾಖೆ ಮತ್ತೊಂದು ಒಳರಸ್ತೆ ಹಾಳುಗೆಡವಲು ಪ್ರಯತ್ನಿಸಿದೆ ಎಂದು ಮನಪಾ ತಿರುವೈಲ್ ವಾರ್ಡಿನ ಕಾರ್ಪೊರೇಟರ್ ಹೇಮಲತಾ ಸಾಲ್ಯಾನ್ ದೂರಿದರು.
ತಿರುವೈಲು ಕನ್ನಡ ಮಾಧ್ಯಮ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುರುಪುರ, ಉಳಾಯಿಬೆಟ್ಟು, ಮೂಡುಶೆಡ್ಡೆ ಹಾಗೂ ಇತರ ಮರಳು ವ್ಯಾಪಾರಿಗಳು ಮರಳು ದೇಣಿಗೆ ನೀಡಿದ್ದಾರೆ. ಶಾಲೆಯ ಆಟದ ಮೈದಾನದಲ್ಲಿ ಮರಳು ರಾಶಿ ಹಾಕಿದರೆ ಮಕ್ಕಳಿಗೆ ಆಟಕ್ಕೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಹತ್ತಿರದ ಖಾಲಿ ಜಾಗದಲ್ಲಿ ಮರಳು ಸಂಗ್ರಹಿಸಲಾಗಿದೆ. ಕಳೆದ ತಿಂಗಳು ಇತರೆಡೆ ಮರಳು ಜಪ್ತಿ ಮಾಡುತ್ತಿದ್ದಾಗ, ನಾವು ಮುಂಜಾಗ್ರತೆ ಕ್ರಮವಾಗಿ ಈ ಮರಳು ಸಂಗ್ರಹದ ಉದ್ದೇಶವನ್ನು ಡೀಸಿಗೆ ತಿಳಿಸಿದ್ದೆವು. ಇಷ್ಟಿದ್ದ ಮೇಲೂ ಈಗ ಏಕಾಏಕಿಯಾಗಿ ಮರಳು ಎತ್ತಂಗಡಿಗೆ ಮುಂದಾಗಿದ್ದು, ನಾವು ತಡೆದಿದ್ದೇವೆ ಎಂದು ರಘು ಸಾಲ್ಯಾನ್ ಹೇಳಿದರು.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



