ಮಂಗಳೂರು: ರಾಜ್ಯ ಸರಕಾರ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ ಮತ್ತು ತುಟ್ಟಿಭತ್ತೆಯನ್ನು ಹೆಚ್ಚಿಸಿದ್ದರೂ ಬೀಡಿ ಮಾಲಕರು ಅದನ್ನು ಕಾರ್ಮಿಕರಿಗೆ ನೀಡಿಲ್ಲ. ಇದನ್ನು ವಿರೋಧಿಸಿ ಜೂ. 1 ಮತ್ತು 2ರಂದು ಎಲ್ಲ ಬೀಡಿ ಡಿಪ್ಪೋಗಳ ಮುಂದೆ ಪ್ರತಿಭಟನೆ ನಡೆಸಲು ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು) ತೀರ್ಮಾನಿಸಿದೆ.
ಸಿಐಟಿಯು ನೇತೃತ್ವದಲ್ಲಿ ಬೀಡಿ ಕಾರ್ಮಿಕರ ತೀವ್ರ ಹೋರಾಟದ ಫಲವಾಗಿ ರಾಜ್ಯ ಸರಕಾರವು ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ 210 ರೂ. ಕನಿಷ್ಠ ಕೂಲಿ ಮತ್ತು ಪ್ರತಿ ಪಾಯಿಂಟ್ಗೆ 0.04 ಪೈಸೆಯಂತೆ 10.52 ರೂ. ತುಟ್ಟಿಭತ್ತೆಯನ್ನು ಏರಿಕೆ ಮಾಡಿದೆ. ಈ ಏರಿಕೆ ವೇತನವನ್ನು ಬೀಡಿ ಮಾಲಕರು 2018 ಎ. 1ರಿಂದ ನೀಡಬೇಕಾಗಿತ್ತು. ಆದರೆ ಈವರೆಗೂ ನೀಡಿಲ್ಲ. ಮಂಗಳೂರಿನಲ್ಲಿ ಬೆಳಗ್ಗೆ 10ಕ್ಕೆ ಜ್ಯೋತಿ ವೃತ್ತದಿಂದ ಮೆರವಣಿಗೆ ಹೊರಟು ಭಾರತ್ ಬೀಡಿ ವರ್ಕ್ಸ್ ಲಿಮಿಟೆಡ್ ಆಡಳಿತ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು. ಬೀಡಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

