ಮಂಗಳೂರು: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ಘಟನೆ ನಗರದ ಪುರಭವನದ ಪ್ರವೇಶ ದ್ವಾರದ ಬಳಿರುವ ಮಲ್ಯ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ನಗರದಲ್ಲಿ ಮಿಂಚು ಸಿಡಿಲಿನ ಸಹಿತ ಭಾರಿ ಮಳೆ ಸುರಿದಿದ್ದು, ನಂತರ ಮಲ್ಯ ರಸ್ತೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಸಿಡಿಲು ಬಡಿದು ಮತ್ತು ಬೀದಿದೀಪದ ಸಂಪರ್ಕದಿಂದ ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿರುವ ಸಾಧ್ಯತೆ ಕಂಡುಬಂದಿದೆ. ಮೃತಪಟ್ಟ ಯುವಕನ ಗುರುತು ಪತ್ತೆಯಾಗಿಲ್ಲ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ತಿಳಿಸಿದ್ದಾರೆ.
ಇದಲ್ಲದೆ ಬಿಜೈ ಕಾಪಿಕ್ಕಾಡ್ ನಲ್ಲಿ ಜೆ.ಜೆ.ವಿ. ಫರ್ನಾಂಡಿಸ್ ಎನ್ನುವವರ ಮನೆಗೆ ಸಿಡಿಲು ಬಡಿದು ಬೆಂಕಿ ತಗುಲಿದ್ದು, ಪರಿಣಾಮ ಮನೆಯ ಸಮೀಪದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಹೊತ್ತಿಕೊಂಡ ಬೆಂಕಿ ಮನೆಗೂ ತಗುಲಿತ್ತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದ್ದಾರೆ.
ಇನ್ನು ನಗರದಲ್ಲಿ ಮಾತ್ರವಲ್ಲದೆ ಜಿಲ್ಲೆಯ ಹಲವೆಡೆ ಗುಡುಗು , ಮಿಂಚು ಸಹಿತ ಮಳೆ ಬಂದಿದೆ. ಬೆಳ್ತಂಗಡಿ, ಸುಬ್ರಮಣ್ಯ , ಸುಳ್ಯ ಬೆಳ್ಳಾರೆಯಲ್ಲೂ ಉತ್ತಮ ವರ್ಷಧಾರೆಯಾಗಿದೆ.

