ಮಂಗಳೂರು: ಮೇ 5 ರಂದು ಮೋದಿ ನೇತೃತವದಲ್ಲಿ ನಡೆಯುವ ಪ್ರಚಾರ ಸಭೆಯು ದ.ಕ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪೂರಕವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಗೆ ಮಂಗಳೂರು ಆಯ್ಕೆಯಾದರೂ ನಿಧಾನಗತಿಯ ಕಾಮಗಾರಿ ಮಾಡುವ ಮೂಲಕ ಕಾಂಗ್ರೆಸ್ ಅಸೂಯೆಯ ರಾಜಕಾರಣ ಮಾಡಿದೆ. ಸ್ಮಾರ್ಟ್ ಸಿಟಿಯ ಯಾವುದೇ ಸಭೆಗಳಿಗೆ ಸಂಸದನಾದ ನನ್ನನ್ನು ಆಹ್ವಾನಿಸಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನವಾದರೆ ಕೇಂದ್ರ ಸರ್ಕಾರಕ್ಕೆ ಪ್ಲಸ್ ಆಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಕಾಂಗ್ರೆಸ್ ಅಸೂಯೆಯಿಂದ ನಿಧಾನಗತಿ ಕಾರ್ಯ ಮಾಡಿದೆ ಎಂದು ಆರೋಪಿಸಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಪತ್ನಿ ಗಂಡನ ಪರ ಚುನಾವಣಾ ಪ್ರಚಾರ ನಡೆಸಿದಾಗ ನಟ ಪ್ರಕಾಶ್ ರೈ ಟೀಕೆ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕಾಶ್ ರೈ ಬಿಜೆಪಿ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯ ಇಲ್ಲ. ವಿಚಾರವಾದಿಯಂತೆ ಪೋಸ್ ನೀಡುತ್ತಿರುವ ರೈ ಮೊದಲು ಹಿಂದೂ ಧರ್ಮವನ್ನು ಅವಹೇಳನ ಮಾಡುವುದನ್ನು ನಿಲ್ಲಿಸಲಿ ಎಂದರು.
ಮಂಗಳೂರು ನಗರದ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಅನುದಾನವನ್ನು ರಮಾನಾಥ ರೈ ಸಮರ್ಪಕವಾಗಿ ಬಳಕೆಮಾಡಿಲ್ಲ ಎಂದು ದೂರಿದರು.

