ಮಂಗಳೂರು: ಮೂವರು ಯುವಕರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ನಗರದ ಕಸಬ ಬೆಂಗ್ರೆಯಲ್ಲಿ ತಡರಾತ್ರಿ ನಡೆದಿದೆ.
ಕಸಬ ಬೆಂಗ್ರೆ ನಿವಾಸಿಗಳಾದ ಅನ್ವೀಝ್(17), ಸಿರಾಜ್ ಹಾಗೂ ಇಝಾದ್ ದಾಳಿಗೆ ಒಳಗಾದ ಯುವಕರು ಎಂದು ಗುರುತಿಸಲಾಗಿದೆ.
ಈ ಮೂವರು ಯುವಕರು ರವಿವಾರ ರಾತ್ರಿ ಕಸಬ ಬೆಂಗ್ರೆಯಿಂದ ತಣ್ಣೀರುಬಾವಿ ಕಡೆಗೆ ಬೈಕ್ ನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಕಸಬ ಬೆಂಗ್ರೆಯ ಫುಟ್ಬಾಲ್ ಮೈದಾನದಲ್ಲಿ ನಿಂತಿಂದ್ದ ಆರು ಮುಸುಕುಧಾರಿ ದುಷ್ಕರ್ಮಿಗಳು ಇವರನ್ನು ತಡೆಗಟ್ಟಿದ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಅನ್ವೀಝ್ ಎಂಬ ಯುವಕ ಗಂಭೀರ ಗಾಯಗೊಂಡಿದ್ದು, ಸಿರಾಜ್ ಹಾಗೂ ಇಝಾದ್ ಗಾಯಗೊಂಡರೂ ದಾಳಿಕೋರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಅವರು ತಮ್ಮ ಸ್ನೇಹಿತರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

