ವಾಮಂಜೂರು: ಇಲ್ಲಿನ ಎಸ್ ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಚೈತ್ರದ ಚಿಗುರು 2018” ಬೇಸಿಗೆ ಶಿಬಿರಕ್ಕೆ ಸಂಚಲನ ಡೀಡ್ಸ್ ಸಂಸ್ಥೆಯ ಆಶಾ ಬೇಕಲ್ ಶುಕ್ರವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜೀವನ ಮೌಲ್ಯದ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು. ಮಕ್ಕಳು ಜೀವನದಲ್ಲಿ ತೊಂದರೆ ಬಂದಾಗ ಧೈರ್ಯದಿಂದ ಎದುರಿಬೇಕು ಮತ್ತು ಜೀವನವನ್ನು ಆನಂದಿಸುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್.ವಿ. ಮಾತನಾಡಿ, ಬೇಸಗೆ ರಜೆಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಶಿಬಿರದಲ್ಲಿ ಕಲಿತ ವಿಚಾರಗಳು ಸಹಕಾರಿಯಾಗಲಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಎಸ್ ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಹೈಸ್ಕೂಲ್ ವಿಭಾಗದ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಿತ್ರ ಕಲಾವಿದ ನಿತೇಶ್ ಕಲ್ನಾಡು, ಚಿತ್ರಕಲಾ ಶಿಕ್ಷಕಿ ಶಾಲಿನಿ ಮತ್ತಿತರರು ಉಪಸ್ಥಿತರಿದ್ದರು.
ರಮೇಶ್ ಆಚಾರ್ ಅವರು ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಮಾರ್ಯೆಟ್ ಮಸ್ಕರೇನಸ್ ವಂದಿಸಿದರು. ವಿದ್ಯಾವತಿ ಕಾರ್ಯಕ್ರಮವನ್ನು ನಿರೂಪಿಸಿದರು.


