ಸುರತ್ಕಲ್: ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಗೈದಿರುವ ಘಟನೆ ಇಲ್ಲಿನ ಕಾಟಿಪಳ್ಳದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಕಾಟಿಪ್ಪಳ್ಳದ ಕೈಕಂಬ ನಿವಾಸಿ ದೀಪಕ್(21) ಮೃತಪಟ್ಟವನೆಂದು ಗುರುತಿಸಲಾಗಿದೆ.
ದೀಪಕ್ ಸಿಮ್ ಕಾರ್ಡ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಹಿಂದು ಸಂಘಟನೆಯೊಂದರ ಕಾರ್ಯಕರ್ತನೆಂದು ತಿಳಿದು ಬಂದಿದೆ.
ದೀಪಕ್ ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ನಾಲ್ವರ ತಂಡವೊಂದು ಕಾರಿನಲ್ಲಿ ಬಂದು ಅಡ್ಡಗಟ್ಟಿ, ಬಳಿಕ ದುಷ್ಕರ್ಮಿಗಳು ಇಳಿದು ನೇರವಾಗಿ ದೀಪಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಮುಸ್ಲಿಮರು ಕಲ್ಲೆಸೆದು ದುಷ್ಕರ್ಮಿಗಳನ್ನು ಓಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೃತ್ಯಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಸುದ್ದಿ ತಿಳಿದು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಸ್ಥಳಕ್ಕಾಗಮಿಸಿದ್ದಾರೆ.



