ಮಂಗಳೂರು: ಅಯ್ಯಪ್ಪ ವ್ರತಧಾರಿಯೊರ್ವರಿಗೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಅಯ್ಯಪ್ಪ ವ್ರತಧಾರಿಗೂ ಹಾಗೂ ಬಸ್ ಚಾಲಕನ ನಡುವೆ ವಾಗ್ವಾದ ತೀವ್ರಗೊಂಡು ಸ್ಥಳದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆ ನಗರದ ಹೊರವಲಯದ ಗಂಜಿಮಠದಲ್ಲಿ ಮಂಗಳವಾರ ನಡೆದಿದೆ.
ಖಾಸಗಿ ಬಸ್ ಅಯ್ಯಪ್ಪ ವೃತಧಾರಿಗೆ ಢಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬಸ್ ಚಾಲಕ ಹಾಗೂ ಅಯ್ಯಪ್ಪ ವೃತಧಾರಿ ನಡುವೆ ಮಾತುಕತೆ ತೀವ್ರಗೊಂಡಿದೆ ಎಂದು ತಿಳಿದು ಬಂದಿದೆ.
ಈ ವೇಳೆ ಬಸ್ ಚಾಲಕ ಅಯ್ಯಪ್ಪ ವೃತಧಾರಿಯನ್ನು ನಿಂದಿಸಿದ್ದಾನೆ ಎನ್ನಲಾಗಿದ್ದು, ಪರಿಣಾಮ ಅಯ್ಯಪ್ಪ ವ್ರತಧಾರಿಗಳು ಸ್ಥಳಕ್ಕೆ ಧಾವಿಸಿ ಬಸ್ ಚಾಲಕ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ. ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪರಸ್ಪರ ಕೈ ಕೈ ಮಿಗಿಲಾಯಿಸುವ ಹಂತಕ್ಕೆ ತಲುಪಿದಾಗ ಬಜ್ಪೆ ಪೊಲೀಸರು ಸ್ಥಳಕ್ಕೆ ಬೇಟಿಯಿತ್ತು ಗುಂಪು ಚದುರಿಸಲು ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ವಿರುದ್ಧ ಪ್ರತಿಭಟನೆ: ಪೊಲೀಸರು ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿ ಪ್ರಹಾರ ಮಾಡಿದ ಪರಿಣಾಮ ಹತ್ತು ವರ್ಷದ ಬಾಲಕ ಸೇರಿ ಕೆಲವು ಅಯ್ಯಪ್ಪ ವೃತಧಾರಿಗಳಿಗೆ ಗಾಯವಾಗಿದ್ದು, ಇದನ್ನು ಖಂಡಿಸಿ ವ್ರತಧಾರಿಗಳು ಬಜ್ಪೆ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
