ಮಂಗಳೂರು: ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ, ಕಚೇರಿಗಳ ಮೇಲೆ ನಡೆದಿರುವ ಐ.ಟಿ. ದಾಳಿಯನ್ನು ಕಟುವಾಗಿ ಖಂಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಡಿ ಕೆ ಶಿವಕುಮಾರ್ ಅವರನ್ನು ಗುರಿಮಾಡಿಕೊಂಡು 39 ಕಡೆ ಸಿ ಆರ್ ಪಿ ಎಫ್ ಜೊತೆ ದಾಳಿ ನಡೆಸಲಾಗಿದೆ. ಅಂದರೆ ಡಿಕೆ ಶಿವಕುಮಾರ್ ಎನು ಉಗ್ರಗಾಮಿಯೇ? ಮೋದಿ ವಿರುದ್ದ ಮಾತನಾಡಿದ ನಾಯಕರ ಮೇಲೆಲ್ಲಾ ಹೀಗೆ ಮಾಡುವುದು ಸರಿಯೇ? ಮೋದಿ ಏನು ಹಿಟ್ಲರ್ ಸಂಸ್ಕೃತಿಯವರೇ ಎಂದು ಕಿಡಿಕಾರಿದ್ದಾರೆ.ನಗರದ ಹೋಟೇಲ್ ವುಡ್ ಲ್ಯಾಂಡ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪೂಜಾರಿ ಅವರು ನಾನು ಹಣಕಾಸು ಸಚಿವನಾಗಿದ್ದಾಗ ಕೂಡ ನಾನು ಐಟಿ, ಸರಕು, ಅಬಕಾರಿ ಹಾಗೂ ಗ್ರಾಮಾಭಿವೃದ್ಧಿ ಇಲಾಖೆಯನ್ನು 8-9 ವರ್ಷಗಳ ಕಾಲ ನಿಭಾಯಿಸಿದ್ದೆ ಆದರೆ ಎಂದಿಗೂ ಅದನ್ನು ದುರುಪಯೋಗಪಡಿಸಿಕೊಳ್ಳುವ ಕೆಲಸ ಮಾಡಿರಲಿಲ್ಲ. ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಡಿಕೆಶಿಯವರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ಧಾಳಿ ಮಾಡುವುದರ ಮೂಲಕ ದುರುಪಯೋಗ ಪಡಿಸಿಕೊಂಡಿದ್ದಾರೆ.ಆದಾಯ ತೆರಿಗೆ ಯಾವುದೇ ಒಬ್ಬ ವ್ಯಕ್ತಿ ಅಥವಾ ಪಕ್ಷಕ್ಕೆ ಸೇರಿದ್ದಲ್ಲ.
ಧಾಳಿಯ ವೇಳೆ ಸಿಆರ್ ಪಿಎಫ್ ಯೋಧರನ್ನು ಬಳಸಿಕೊಳ್ಳಲಾಗಿದ್ದು, ಐಟಿ ಇಲಾಖೆಗಳು ದೇಶದ ಮಿಲಿಟರಿ ವ್ಯವಸ್ಥೆಯನ್ನು ದುರುಪಯೋಗಗೊಳಿಸಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಅವರು ಯಾರಿಗೂ ಪ್ರಶ್ನೆ ಮಾಡಲು ಬಿಡುತ್ತಿಲ್ಲ. ಅವರು ತಮ್ಮನ್ನ ತಾವು ಹಿಟ್ಲರ್ ಎಂಬ ಭಾವನೆಯಲ್ಲಿದ್ದಾರೆ ಎಂದರು.ಮೋದಿ ಅಧಿಕಾರಕ್ಕೆ ಬಂದ ಬಳಿಕ 1158 ಕಡೆ ದಾಳಿಗಳನ್ನು ನಡೆಸಿದ್ದಾರೆ. ದಾಳಿಗಳಿಂದ ಎಷ್ಟು ಹಣವನ್ನು ವಶಪಡಿಸಿಕೊಂಡಿದ್ದಾರೆ. ಯಾವುದೇ ಸರ್ಚ್ ವಾರಂಟ್ ಇಲ್ಲದೆ ಡಿಕೆಶಿಯವರ ಮನೆಯ ಮೇಲೆ ಧಾಳಿ ನಡೆಸಲಾಗಿದೆ. ಮೋದಿ ಯಾಕೆ ನಿಯಮಗಳನ್ನು ಮೀರಿ ವರ್ತಿಸುತ್ತಿದ್ದಾರೆ. ಇಂತಹ ಸರ್ವಧಿಕಾರಿ ಹಿಟ್ಲರ್ ವರ್ತನೆಗೆ ಜನ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ಎಂದರು.ಇದು ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವುದನ್ನು ಮೋದಿ ಅರಿಯಬೇಕಾಗಿದೆ. ಇಂದು ಡಿಕೆಶಿ, ನಾಳೆ ಪೂಜಾರಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ. ಮೋದಿ ಸೋನಿಯಾ ಹಾಗೂ ರಾಹುಲ್ ಗಾಂಧಿಯವರನ್ನು ಜೈಲಿಗೆ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪೂಜಾರಿ, ನಾನಾಗಲಿ ಅಥವಾ ಡಿಕೆಶಿಯಾಗಲಿ ಇಂತಹ ಯಾವುದೇ ದಾಳಿಗಳಿಗೆ ಬೆದರುವುದಿಲ್ಲ ಆದರೆ ದಾಳಿಯನ್ನು ನಿಯಮ ಪ್ರಕಾರ ಮಾಡಬೇಕು. ದಾಳಿಗೆ ಸರ್ಚ್ ವಾರಂಟ್ ಇಲ್ಲದೆ, ಸಿಆರ್ ಪಿ ಎಫ್ ಜವಾನರನ್ನು ಬಳಸಿ ಮಾಡಿರುವುದು ಖಂಡನೀಯ. ಡಿಕೆಶೀಯನ್ನು ಒರ್ವ ಭಯೋತ್ಪಾದಕನಂತೆ ದಾಳಿಯ ವೇಳೆ ಬಿಂಬಿಸಲಾಗಿದೆ. ಮೋದಿ ಹೇಗಾದರೂ ಮಾಡಿ ರಾಜ್ಯ ಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಅವರನ್ನು ಸೋಲಿಸುವ ಪ್ರಯತ್ನದಲ್ಲಿದ್ದು, ಅವರ ಪ್ರಯತ್ನ ಮಾತ್ರ ಸಫಲವಾಗುವುದಿಲ್ಲ. ಅಹ್ಮದ್ ಪಟೇಲ್ ಗೆಲುವು ನಿಶ್ಚಿತ ಎಂದರು.ಕಾವ್ಯ ಸಾವಿನ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೂಜಾರಿ ಉಗ್ರಪ್ಪ ನನ್ನ ಶಿಷ್ಯ, ಮತ್ತು ಅವರು ತನ್ನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಉಗ್ರಪ್ಪ ಕಾವ್ಯಾಳ ಹೆತ್ತವರನ್ನ ಭೇಟಿಯಾಗಿದ್ದು, ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ವಿವಿಧ ಸಂಘಟನೆಗಳೂ ಕೂಡ ಪ್ರತಿಭಟನೆ ನಡೆಸಿವೆ ಅಂತಹ ಸಂಘಟನೆಗಳಿಗೆ ನನ್ನ ಬೆಂಬಲವಿದೆ ಎಂದರು.ರಮಾನಾಥ ರೈ ಪೂಜಾರಿಗೆ ಅವಹೇಳನ ಮಾಡಿದ ಕುರಿತು ಎತ್ತಿದ ಪ್ರಶ್ನೆಗೆ ರಮಾನಾಥ ರೈ ಅವರು ತನ್ನನ್ನ ಸಂಪರ್ಕಿಸಿದ್ದು, ವಿಷಯ ಇತರ್ಥವಾಗಿದೆ. ರೈ ತನ್ನಲ್ಲಿ ಕ್ಷಮೆಯನ್ನು ಕೇಳಿದ್ದು, ಅವರು ಎಲ್ಲಿಯೂ ನನ್ನ ವಿರುದ್ದ ಕೆಟ್ಟ ಪದಗಳನ್ನು ಬಳಸಿಲ್ಲ ಎಂದರು.

