ಬಂಟ್ವಾಳ: ದಡ್ಡಲಕಾಡು ಶಾಲೆಯನ್ನು ರಾಜ್ಯದ ಮಾದರಿ ಶಾಲೆಯನ್ನಾಗಿ ರೂಪಿಸುವುದರ ಜೊತೆಗೆ ವಿವಿಧ ಹೋರಾಟಗಳ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನೆರೆಯ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲೂ ಶೈಕ್ಷಣಿಕ ಕ್ರಾಂತಿಯ ಸಂಚಲನ ಮೂಡಿಸಿದೆ. ಇಲ್ಲಿನ ಬಾಳುಪೇಟೆಯ ಶಿಕ್ಷಾಣಾಭಿಮಾನಿಗಳ ಆಹ್ವಾನದ ಮೇರೆಗೆ ಗುರುವಾರ ಅಲ್ಲಿನ ಸರಕಾರಿ ಶಾಲೆಗೆ ಭೇಟಿ ನೀಡಿ ಸಕಲೇಶಪುರದಲ್ಲೂ ಸರಕಾರಿ ಶಾಲೆ ಉಳಿಸುವ ಆಂದೋಲನಕ್ಕೆ ಮುನ್ನುಡಿ ಬರೆದಿದೆ. ಬಾಳ್ಳುಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಮಹಾಸಭೆಯಲ್ಲಿ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಿಕ್ಷಣಾಭಿಮಾನಿಗಳು, ಸಾಹಿತಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳ ಪೋಷಕರು, ಎಸ್ಡಿಎಂಸಿ ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಕಾಶ್ ಅಂಚನ್ ವರ್ಷದಂತೆ ವರ್ಷಕ್ಕೆ ಸರಕರಿ ಶಾಲೆಗಳು ಮುಚ್ಚುತ್ತಿದ್ದು ಬಡ ಮಕ್ಕಳ ಶಿಕ್ಷಣದ ಅಗತ್ಯತೆಯ ದೃಷಿಯಿಂದ ಸರಕಾರಿ ಶಾಲೆಗಳನ್ನು ಉಳಿಸುವ ಅನಿವಾರ್ಯತೆ ಇದೆ. ಬಡವರ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದು ಉತ್ತಮ ಉದ್ಯೋಗ ಹೊಂದಲು ಹಾಗೂ ವ್ಯವಹಾರಿಕ ದೃಷ್ಟಿಯಿಂದ ಪ್ರಾಥಮಿಕ ತರಗತಿಯಿಂದಲೇ ಆಂಗ್ಲ ಭಾಷ ಕಲಿಕೆಯ ಅವಶ್ಯಕತೆ ಇದೆ ಎಂದರು. 
ವೇದಿಕೆಯಲ್ಲಿ ಸಕಲೇಶಪುರ ತಾ.ಪಂ.ಉಪಾಧ್ಯಕ್ಷ ಮಂಜುನಾಥ್, ಕಾಫಿ ಉತ್ಪಾದಕರ ಮಂಡಳಿಯ ಮಾಜಿ ಅಧ್ಯಕ್ಷ ಜಗನ್ನಾಥ, ಡಾ. ಕಿರಣ್, ಆಶಾ, ನಿವೃತ್ತ ಸೈನಿಕ ಮೇಜರ್ ಚಂದ್ರಶೇಖರ್, ಸಾಹಿತಿ ನಂದಿನಿ ವಿಶ್ವನಾಥ್, ನಂಜಪ್ಪ ಗೌಡ, ದೇವರಾಜು, ತಾ.ಪಂ.ಸದಸ್ಯೆ ಶಿವಮ್ಮ, ಧರ್ಮಪ್ರಕಾಶ್, ನಾಗೇಶ್, ಪಾಲಾಕ್ಷ, ಎಸ್ಡಿಎಂಸಿ ಅಧ್ಯಕ್ಷೆ ರೇಣುಕಾ ಸಿಆರ್ಪಿಗಳಾದ ರಾಜು ವಿಠಲ ಮೂರ್ತಿ ಹಾಜರಿದ್ದರು. ಬಳಿಕ ಸಂವಾದ ನಡೆಸಲಾಯಿತು. ಬಾಳುಪೇಟೆ ಸರಕಾರಿ ಶಾಲೆಯನ್ನು ದತ್ತು ಸ್ವೀಕರಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳ ನೂತನ ಸಮಿತಿಯನ್ನು ರಚಿಸಲಾಯಿತು. ದುರ್ಗಾ ಫ್ರೆಂಡ್ಸ್ ಕ್ಲಬ್ನ ಸದಸ್ಯರಾದ ರಾಮಚಂದ್ರ ಕರೆಂಕಿ, ಉದಯಕುಮಾರ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪ್ರಕಾಶ್ ಅಂಚನ್ ಅವರನ್ನು ಸನ್ಮಾನಿಸಲಾಯಿತು.
