ಬೆಂಗಳೂರು: ಹಿರಿಯ ಸಚಿವ ಮಹಾದೇವ ಪ್ರಸಾದ್ ವಿಧಿವಶರಾಗಿದ್ದಾರೆ. ಚಿಕ್ಕಮಗಳೂರಿನ ಖಾಸಗಿ ವಸತಿ ಗೃಹದಲ್ಲಿ ತಂಗಿದ್ದ ಸಚಿವರು ಇಂದು ಬೆಳಿಗ್ಗೆ ಸುಮಾರು 08.30ರ ವೇಳೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.
ಸಹಕಾರ ಸಚಿವ ಎಚ್. ಎಸ್ ಮಹದೇವಪ್ಪ, ಕೊಪ್ಪದಲ್ಲಿ ಸಹಕಾರ ಸಾರಿಗೆ ಸಂಸ್ಥೆಯ ಬೆಳ್ಳಿ ಹಬ್ಬದಲ್ಲಿ ಪಾಲ್ಗೊಳ್ಳಲು ನಿನ್ನೆ ತಡರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಆಗಮಿಸಿ ಚಿಕ್ಕಮಗಳೂರು ಸೆರಾಯಿ ರೆಸಾರ್ಟ್’ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ 8:30 ಆದರೂ ಅವರು ತಮ್ಮ ಕೋಣೆಯ ಬಾಗಿಲು ತೆರೆದಿರಲಿಲ್ಲ. ಹೀಗಾಗಿ ಅವರ ಆಪ್ತ ಸಿಬ್ಬಂದಿಗಳು ಬಲವಂತದಿಂದ ಬಾಗಿಲು ತೆರೆದಾಗ ಸಚಿವರು ಹೃದಯಾಘಾತಕ್ಕೊಳಗಾಗಿರುವ ವಿಚಾರ ಬೆಳಕಿಗೆ ಬಂದಿದೆ. ಜೊತೆಯಲ್ಲೇ ಇದ್ದ ವೈದ್ಯರಾಗಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ವಿಜಯ್ ಕುಮಾರ್ ಅವರನ್ನು ಪರಿಶೀಲಿಸಿ ಸಚಿವರು ವಿಧಿವಶರಾದ ವಿಚಾರ ಖಚಿತಪಡಿಸಿದ್ದಾರೆ.
ಇನ್ನು ಈ ಮೊದಲೇ ಸಚಿವರಿಗೆ ಓಪನ್ ಹಾರ್ಟ್ ಸರ್ಜರಿಯಾಗಿತ್ತು ಎಂಬ ವಿಚಾರ ತಿಳಿದು ಬಂದಿದೆ. ಇವರು ತಮ್ಮ ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

