ಬೆಂಗಳೂರು: ಕೊನೆಗೂ ಅಬಕಾರಿ ಸಚಿವ ಎಚ್.ವೈ.ಮೇಟಿ ಅವರು ಮಹಿಳೆಯೊಬ್ಬರ ಜೊತೆ ನಡೆಸಿದ ರಾಸಲೀಲೆ ಸಿಡಿ ಬುಧವಾರ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಹಿಂದೆ ತಮ್ಮ ವಿರುದ್ಧದ ರಾಸಲೀಲೆ ಸಿಡಿ ಬಿಡುಗಡೆಯಾದರೆ, ತಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಮೇಟಿ ಹೇಳಿದ್ದರು. ಅದರಂತೆ ಈಗ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಮೇಟಿ ಅವರು ರಾಜಿನಾಮೆ ಪತ್ರದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ, ಚರ್ಚೆ ನಡೆಸಿದ್ದಾರೆ. ಈ ವೇಳೆ ಸಿಎಂ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಮೇಟಿ ಅವರಿಗೆ ಸೂಚಿಸಿದ್ದು, ಸಿಎಂ ಸೂಚನೆಯಂತೆ ರಾಜಿನಾಮೆ ನೀಡಿದ್ದಾರೆ.
ರಾಸಲೀಲೆ ಸಿಡಿಯೇ ಇಲ್ಲ ಎಂದು ಮೇಟಿ ಸಾರಸಗಟಾಗಿ ಅಲ್ಲಗಳೆದಿದ್ದರು. ಆ ನಿಟ್ಟಿನಲ್ಲಿ ಈಗ ರಾಸಲೀಲೆ ಸಿಡಿ ಇರೋದು ಸತ್ಯವಾಗಿದೆ. ಸಚಿವರ ರಾಸಲೀಲೆಯದ್ದು ಎನ್ನಲಾದ ಸಿಡಿ 3 ನಿಮಿಷ 23ಸೆಕೆಂಡ್ ಇದೆ. ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಅವರು ನವದೆಹಲಿಯಲ್ಲಿ ಸಿಡಿಯನ್ನು ಬಿಡುಗಡೆ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡುತ್ತಿವೆ.
ಸರ್ಕಾರಿ ಕಚೇರಿಯಲ್ಲಿ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿರುವ ದೃಶ್ಯ ಸಿಡಿಯಲ್ಲಿ ದಾಖಲಾಗಿದೆ. ಸಿಡಿಯಲ್ಲಿ ಎಚ್.ವೈ.ಮೇಟಿ ಮತ್ತು ಮಹಿಳೆ ಸಂಭಾಷಣೆ ಅಸ್ಪಷ್ಟವಾಗಿದೆ
ಈ ಪ್ರಕರಣದಿಂದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಭಾರೀ ಮುಜುಗರಕ್ಕೆ ಸಿಲುಕಿದೆ. ಕಳೆದ ನಾಲ್ಕು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣ ಸಚಿವ ಮೇಟಿ ತಲೆದಂಡ ಪಡೆದುಕೊಂಡಿದೆ. ಟಿವಿ ವಾಹಿನಿಗಳಲ್ಲಿ ಸಚಿವ ಎಚ್.ವೈ.ಮೇಟಿ ಮತ್ತು ಮಹಿಳೆ ಸರ್ಕಾರಿ ಅತಿಥಿ ಗೃಹದಲ್ಲಿ ನಡೆಸಿದ್ದಾರೆ ಎನ್ನಲಾದ ರಾಸಲೀಲೆ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈಗಾಗಲೇ ಮೇಟಿಯವರ ರಾಜೀನಾಮೆಯನ್ನು ಸಿದ್ದರಾಮಯ್ಯ ಅಂಗೀಕರಿಸಿದ್ದಾರೆ. ಈ ವೇಳೆ ತಲೆತಗ್ಗಿಸಿ ನಿಂತಿದ್ದ ಮೇಟಿಯವರನ್ನು ಸಿಎಂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ. ಪ್ರಕರಣ ಕುರಿತಂತೆ ಮುಖ್ಯಮಂತ್ರಿ ತನಿಖೆಗೆ ಆದೇಶ ನೀಡಿದ್ದಾರೆ. ಇಂದು ಬೆಳಗ್ಗೆಯಿಂದ ತಮ್ಮ ಮನೆಯಲ್ಲೇ ಕುಳಿತು ಸುದ್ದಿ ವಾಹಿನಿಗಳನ್ನು ವೀಕ್ಷಿಸುತ್ತಿದ್ದ ಮೇಟಿ ಅವರು ಸುಮಾರು 12 ಗಂಟೆ ವೇಳೆಗೆ ರಾಸಲೀಲೆಯ ಸಿಡಿ ಬಹಿರಂಗಗೊಳ್ಳುತ್ತಿದ್ದಂತೆ ಕದ್ದುಮುಚ್ಚಿ ಕೃಷ್ಣಾಕ್ಕೆ ಆಗಮಿಸಿದರು. ಸಿಎಂ ಅಧಿಕೃತ ನಿವಾಸ ಕಾವೇರಿ ಮತ್ತು ಗೃಹ ಕಚೇರಿ ಕೃಷ್ಣಾ ಪಕ್ಕದಲ್ಲೇ ಇರುವ ಸರ್ಕಾರಿ ಬಂಗಲೆ ಅನುಗ್ರಹಕ್ಕೆ ಆಗಮಿಸಿದ ಎಚ್.ವೈ.ಮೇಟಿ ಪ್ರಕರಣದಲ್ಲಿ ತಮ್ಮದೇನೂ ತಪ್ಪು ಇಲ್ಲ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.
ಈ ವೇಳೆ ಮೇಟಿಯನ್ನು ನಿನಗೆ ನಾಚಿಕೆಯಾಗುವುದಿಲ್ಲವೇ? ನಿನ್ನಿಂದ ಪಕ್ಷ ಮತ್ತು ಸರ್ಕಾರಕ್ಕೆ ಆಗಬಾರದ ಹಾನಿಯಾಗಿದೆ. ಇಂತಹ ಇಳಿವಯಸ್ಸಿನಲ್ಲಿ ಇಂಥ ಹೀನ ಕೆಲಸ ಮಾಡಲು ನಿನಗೆ ಮನಸ್ಸಾದರೂ ಹೇಗೆ ಬಂತು ಎಂದು ತೀವ್ರ ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಸಚಿವರು, ಶಾಸಕರು ಗೃಹ ಕಚೇರಿ ಕೃಷ್ಣಾದ ಹೆಬ್ಬಾಗಿಲ ಮೂಲಕ ತಮ್ಮ ವಾಹನದಲ್ಲಿ ಬರುವುದು ವಾಡಿಕೆ. ಆದರೆ, ಮೇಟಿ ಯಾವುದೇ ವಾಹನ ಬಳಸದೆ, ಯಾರಿಗೂ ತಿಳಿಸದೆ ಕಾಲ್ನಡಿಗೆಯಲ್ಲೇ ಮೆಲ್ಲಗೆ ಬಂದು ಗೃಹ ಕಚೇರಿ ಸೇರಿಕೊಂಡರು.
ರಾಸಲೀಲೆಯಲ್ಲಿ ಮೇಟಿ ಭಾಗವಹಿಸಿರುವ ಸಿಡಿ ಬಿಡುಗಡೆಯಾದರೆ ಮುಲಾಜಿಲ್ಲದೆ ರಾಜೀನಾಮೆ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಸಿಡಿ ಬಿಡುಗಡೆ:
ಕಳೆದ ಮೂರ್ನಾಲ್ಕು ದಿನಗಳಿಂದ ಸಿಡಿ ಬಿಡುಗಡೆ ಬಗ್ಗೆ ತೀವ್ರ ಕುತೂಹಲ ವ್ಯಕ್ತವಾಗಿತ್ತು. ಹಗರಣವನ್ನು ಬಹಿರಂಗ ಪಡಿಸಿದ ಪ್ರಮುಖ ವ್ಯಕ್ತಿ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಅವರು ದೆಹಲಿಯಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳಿಗೆ ಸಿಡಿ ಬಿಡುಗಡೆ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಈ ಪ್ರಕರಣ ತೀವ್ರ ಕುತೂಹಲ ಕೆರಳಿಸಿತ್ತಲ್ಲದೆ, ತೀವ್ರ ಚರ್ಚೆಗೂ ಗ್ರಾಸವಾಗಿತ್ತು.
ರಾಜಶೇಖರ್ ಅವರು ಮಾಧ್ಯಮದ ಬಳಿ ತಮ್ಮ ಬಳಿ ಸಿಡಿ ಇದೆ ಎಂದು ಹೇಳಿ ನಂತರ ಇಲ್ಲ ಎಂದು ವಾದಿಸುತ್ತಿದ್ದರು. ರಾಸಲೀಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಹಿಳೆ ಮೊದಲು ಮೇಟಿ ಅವರ ಮೇಲೆ ಆರೋಪ ಮಾಡಿದ್ದರು. ನಂತರ ಮೊನ್ನೆ ಅದೇ ಮಹಿಳೆ ಪತ್ರಿಕಾಗೋಷ್ಠಿ ನಡೆಸಿ ನನಗೆ ಜೀವ ಬೆದರಿಕೆ ಇದೆ. ಬಲವಂತದಿಂದ ನನ್ನನ್ನು ಈ ಕೃತ್ಯಕ್ಕೆ ಬಳಸಿಕೊಂಡು ಚಿತ್ರೀಕರಣ ಮಾಡಲಾಗಿದೆ. ಚಿತ್ರೀಕರಿಸಿದ ವ್ಯಕ್ತಿ ಮೇಲೆ ದೂರು ಕೊಡುತ್ತಿದ್ದೇನೆ ಎಂದು ಹೇಳಿ ಎಸ್ಪಿಯವರಿಗೆ ದೂರು ನೀಡಿದ್ದರು. ಒಂದು ವೇಳೆ ಸಿಡಿ ಬಿಡುಗಡೆಯಾದರೆ ತಕ್ಷಣವೇ ರಾಜೀನಾಮೆ ನೀಡಬೇಕೆಂಬ ಸೂಚನೆಯನ್ನು ನೀಡಲಾಗಿತ್ತು. ಅದರಂತೆ ಇಂದು ಸಿಡಿ ಬಿಡುಗಡೆಯಾಗುತ್ತಿದ್ದಂತೆ ಮೇಟಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದಾರೆ.

