ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ತನ್ನ ಶಾಸಕ ಸ್ಥಾನಕ್ಕೆ ಅ.17ರಂದು ಮಧ್ಯಾಹ್ನ ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು ಭೇಟಿಯಾಗಿ ರಾಜಿನಾಮೆ ಸಲ್ಲಿಸಿದರು.
‘ಸೆಪ್ಟೆಂಬರ್ ಕೊನೆ ವಾರದಲ್ಲೇ ರಾಜಿ ನಾಮೆ ನೀಡುವ ನಿರ್ಧಾರ ಕೈಗೊಂಡಿದ್ದೆ. ಕಾವೇರಿ ನೀರಿಗಾಗಿ ಹೋರಾಟ ಆರಂಭ ಗೊಂಡು ರಾಜ್ಯದಲ್ಲಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ನಿರ್ಧಾರ ಮುಂದೂಡಿದ್ದೆ’ ಎಂದರು.
‘ರಾಜಕೀಯ ಜೀವನದ ಕೊನೆ ಹಂತದಲ್ಲಿ ಗೌರವ ಯುತವಾಗಿ ನಿವೃತ್ತಿ ಹೊಂದಬೇಕು ಎಂದು ಬಯಸಿದ್ದೆ. ಅದಕ್ಕಾಗಿ ಈ ಹಿಂದೆ ಇದು ನನ್ನ ಕೊನೆಯ ಚುನಾವಣೆ ಎಂದು ಪ್ರಕಟಿಸಿದ್ದೆ. ಆದರೆ ಪರಿಸ್ಥಿತಿ ಬದಲಾಗಿದ್ದು, ರಾಜಿನಾಮೆ ನೀಡಿದ ನಂತರ ನಂಜನಗೂಡಿನಲ್ಲಿ ಮೊದಲ ಸಭೆ ನಡೆಸಲಾಗುವುದು. ರಾಜಿನಾಮೆ ನೀಡುವ ನಿರ್ಧಾರಕ್ಕೆ ಬರಲು ಕಾರಣವಾದ ಅಂಶಗಳನ್ನು ಕ್ಷೇತ್ರದ ಮತದಾರರಿಗೆ, ಬೆಂಬಲಿಗರಿಗೆ ತಿಳಿಸುತ್ತೇನೆ’ ಎಂದು ಹೇಳಿದರು.
ನಂಜನಗೂಡು ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ಅವರು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನ ಹೊಂದಿದ್ದರು. ಈ ಸಂಧರ್ಭ ಮಾತನಾಡಿದ ಅವರು, ನನ್ನಲ್ಲಿ ಸಾಕಷ್ಟು ನೋವಿದೆ. ಅದನ್ನೆಲ್ಲ ಹೇಳಿಕೊಳ್ಳಬೇಕಿದೆ. ಸದ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಲಿದ್ದೇನೆ. ಬಳಿಕ ತಾನು ಸ್ವತಂತ್ರ. ಆನಂತರ ಮಾಧ್ಯಮದೆದುರು ನನ್ನ ನೋವು ಬಿಚ್ಚಿಡಲಿದ್ದೇನೆ ಎಂದು ಹೇಳಿದರು.

