ಮಂಗಳೂರು: ಡಿಸೆಂಬರ್ 9 ರಿಂದ 13ರ ವರೆಗೆ ಬದಿಯಡ್ಕದಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ವಿಶ್ವ ತುಳುವೆರೆ ಆಯನೊ ಇದರ ವಿಶೇಷ ಮಾಸಭೆಯು ಕಳೆದ ಶುಕ್ರವಾರ (ಸೆ.30) ಅಪರಾಹ್ನ ಮಂಗಳೂರು ಉರ್ವಾಸ್ಟೋರ್ ಅಲ್ಲಿನ ತುಳು ಭವನದಲ್ಲಿನ ಸಿರಿಚಾವಡಿ ಸಭಾಗೃಹದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮವಾರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗೆ ಅಧ್ಯಕ್ಷರಾಗಿ ಎ.ಸಿ.ಭಂಡಾರಿ ಅವಿರೋಧವಾಗಿ ಆಯ್ಕೆಗೊಳಿಸಲ್ಪಟ್ಟರು. ಗೌರವಾಧ್ಯಕ್ಷರಾಗಿ ಅಡ್ಯಾರು ಮಹಾಬಲ ಶೆಟ್ಟಿ, ಉಪಾಧ್ಯಕ್ಷರಾಗಿ ಡಾ| ದೇವರಾಜ್ ಕೆ., ಭಾರತಿ ರೈ ಕಿನ್ನಿಗೋಳಿ, ಯೋಗೀಶ್ ಶೆಟ್ಟಿ, ರಾಮಚಂದರ್ ಬೈಕಂಪಾಡಿ, ಪ್ರಧಾನ ಸಂಚಾಲಕರಾಗಿ ರಾಜಗೋಪಾಲ ರೈ, ಪ್ರಧಾನ ಕಾರ್ಯದರ್ಶಿ ಆಗಿ ಟಿ.ತಾರನಾಥ ಕೊಟ್ಟಾರಿ ಒಡಿಯೂರು, ಜತೆ ಕಾರ್ಯದರ್ಶಿ ಆಗಿ ಕರುಣಾಕರ ಶೆಟ್ಟಿ, ಡಿ.ಎಂ ಕುಲಾಲ್, ಮೋಹನ್ ಕೊಪ್ಪಳ ಕದ್ರಿ, ಪ್ರೇಮನಾಥ್ ಗೀತಾ ಶೆಟ್ಟಿ, ಪಿ.ಎ.ಪೂಜಾರಿ, ವಸಂತ ಪೂಜಾರಿ, ಬಹುಭಾಷಾ ಸಂಗಮ ಸಂಚಾಲಕರಾಗಿ ಡಾ| ಸದಾನಂದ ಪೆರ್ಲ, ದೈವಾರಾಧನೆ ಸಮಿತಿ ಸಂಚಾಲಕರಾಗಿ ದಯಾನಂದ ಕತ್ತಾಲ್ಸಾರ್, ಕ್ರೀಡಾ ಸಂಚಾಲಕರಾಗಿ ಕೆ.ಚಂದ್ರಶೇಖರ್ ರೈ ಹಾಗೂ ಮಾಧ್ಯಮ ಸಮಿತಿ ಸಂಚಾಲಕರಾಗಿ ಜಗನ್ನಾಥ ಶೆಟ್ಟಿ ಬಾಳ ಸರ್ವನುಮತದಿಂದ ಆಯ್ಕೆಗೊಂಡರು.

ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಮಾತನಾಡಿ ತುಳುವರು ತಮ್ಮ ಅಸ್ಮಿತೆಯನ್ನು ತೋರ್ಪಡಿಸುವ ಶಕ್ತಿ ಈ ಆಯಾನದ ಮುಖ್ಯ ಉದ್ದೇಶವಾಗಿದ್ದು ಭಾರತದಾದ್ಯಂತ ನೆಲೆಯಾದ ತುಳುವರು ಜಾತಿಮತಬೇಧವನ್ನು ಮರೆತು ಈ ಮೂಲಕ ಒಗ್ಗೂಡ ಬೇಕು ಎಂದರು.

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಭಾರಿ ಪ್ರಯತ್ನ ನಡೆಯುತ್ತಿದೆ. ವಿಶ್ವ ಮಟ್ಟದಲ್ಲಿ ತುಳುವರನ್ನು ಒಗ್ಗೂಡಿಸುವ ಕೆಲಸ ಆಗಬೇಕಾಗಿದೆ ಎಂದರು. ಅಖಿಲ ಭಾರತ ತುಳು ಒಕ್ಕೂಟದ ಮಾಜಿ ಅಧ್ಯಕ್ಷ ಅಡ್ಯಾರು ಮಹಾಬಲ ಶೆಟ್ಟಿ ತಿಳಿಸಿದರು.

ಪಾಶ್ಚಿಮಾತ್ಯ ಸಂಸ್ಕೃತಿಯನ್ನುಅನುಕರಣೆ ಮಾಡುತ್ತಿರುವ ಇಂದಿನ ಪೀಳಿಗೆಯನ್ನು ತುಳು ಸಂಸ್ಕೃತಿಯತ್ತ ಒಯ್ಯುವ ಕೆಲಸ ಮಾಡಬೇಕಾಗಿದೆ. ಇಡೀ ತುಳು ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ತುಳುವರೆಲ್ಲ ಜಾತಿ, ಗಡಿಯ ಹಂಗಿಲ್ಲದೆ ದುಡಿಯಬೇಕು ಎಂದು ರವೀಶ್ ತಂತ್ರಿ ಎಂದರು.

ತುಳುವೆರೆಅಯನೊದ ಅಂಗವಾಗಿಸುಮಾರು 180 ದಿನಗಳ ರಥಯಾತ್ರೆ ಬಸ್ರೂರು ತುಳುವೇಶ್ವರದಿಂದ ಆರಂಭಗೊಂಡು ಕಾಸರಗೊಡು ಸಮೀಪದ ಪಾಣತೂರಿನ ತುಳುವನದಲ್ಲಿ ಸಮಾಪ್ತಿಯಾಗಿದೆ. ಸಮ್ಮೇಳನದಲ್ಲಿ ದೇಶ-ವಿದೇಶಗಳಲ್ಲಿ ನೆಲೆಸಿರುವ ಸುಮಾರು 3 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನದ ಅಂಗವಾಗಿ ಕನ್ನಡ, ಮಲಯಾಳ, ಕೊಂಕಣೀ, ಮರಾಠಿ, ಕರ್ಹಾಡ, ಬ್ಯಾರಿ, ಮಾಪಿಳ್ಳೆ, ಉರ್ದು, ಕುಂದಗನ್ನಡ, ಅರೆಗನ್ನಡ, ಕೊಡವ, ಹವ್ಯಕ, ಮಾವಿಲ ಮೊದಲಾದ ಭಾಷೆಗಳ ಬಹುಭಾಷಾ ಸಂಗಮ ನಡೆಯಲಿದೆ. ನಿರಂತರ ಐದು ದಿನಗಳ ಕಾಲ ವಿವಿಧ ವೇದಿಕೆಯಲ್ಲಿ ನಡೆಯಲಿರುವ ಈ ಬೃಹತ್ ಸಮ್ಮೇಳನದಲ್ಲಿ ತುಳುನಾಡಿನ ದೈವಾರಾಧನೆ ನಿನ್ನೆ, ಇಂದು-ನಾಳೆ, ತುಳುನಾಡಿನ ಒತ್ತೊರ್ಮೆ (ಜನಮೈತ್ರಿ ಸಂಗಮ) ತುಳು ಸಾಹಿತ್ಯ ಸಮ್ಮೇಳನ, ತುಳು ಸಿನಿಮಾ, ನಾಟಕ, ಯಕ್ಷಗಾನ ಕಲಾವಿದರ ಸಮ್ಮೇಳನ, ಹೊರನಾಡು ಮತ್ತು ವಿದೇಶಿ ತುಳುವರ ಸಮ್ಮೇಳನ, ಮಾತೃ ಸಮ್ಮೇಳನ, ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ (ತುಳುನಾಡ ಗೊಬ್ಬುಲು) ಮತ್ತು ರಾಷ್ಟ್ರೀಯ ಜಾನಪದ ಉತ್ಸವ, ಕೃಷಿ ಸಮ್ಮೇಳನ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ. ತುಳುವಿಗೆ ಸಂಬಂಧಿಸಿದ ವಿವಿಧ ಗೋಷ್ಠಿಗಳು, ಜಾನಪದ ಸಾಂಸ್ಕೃತಿಕ ಪ್ರದರ್ಶನಗಳು, ಗುಡಿ ಕೈಗಾರಿಕೆ, ಕೃಷಿ ಯಂತ್ರೋಪಕರಣ, ವಿವಿಧ ಮಾರಾಟ ಮಳಿಗೆಗಳು ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಪ್ರಸ್ತಾವಿಕ ನುಡಿಗಳನ್ನಾಡಿ ಆಯನೊ ಸಮಿತಿ ಗೌರವ ಕಾರ್ಯದರ್ಶಿ ಡಾ| ರಾಜೇಶ್ ಆಳ್ವ ಬದಿಯಡ್ಕ ತಿಳಿಸಿದರು.

ಜಯಚಂದ್ರ ವರ್ಮ, ಯೋಗೇಶ್ ಶೆಟ್ಟಿ ಜೆಪ್ಪು, ಎಸ್.ಶ್ರೀನಾಥ್ ವೇದಿಕೆಯಲ್ಲಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ದುರ್ಗಾಪ್ರಸಾದ್ ರೈ, ರೂಪಕಲಾ ಆಳ್ವ, ರಿಜಿಸ್ತ್ರಾರ್ ಕೆ.ಚಂದ್ರಶೇಖರ್ ರೈ, ಹಿರಿಯಡ್ಕ ಮೋಹನ್ದಾಸ್, ಶ್ರೀನಿವಾಸ ಮಾಂಕುಡೆ, ಜಯಂತಿ ಬಂಗೇರ ಮೂಡಬಿದ್ರೆ, ವಿಜಯಕುಮಾರ್ ಹೆಬ್ಬಾರಬೈಲು ಸೇರಿದಂತೆ ವಿವಿಧ ತುಳು ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ನಿಟ್ಟೆ ಶಶಿಧರ್ ಶೆಟ್ಟಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಸಭಾ ಕಲಾಪ ನಿರೂಪಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ ಕುಲಾಲ್ ಧನ್ಯವಾದಿಸಿದರು.

