ಮಂಗಳೂರು: ಯೆನೆಪೋಯ ವಿಶ್ವವಿದ್ಯಾನಿಲಯವು, ಯೆನೆಪೋಯ ಫಿಸಿಯೋಥೆರಪಿ ಕಾಲೇಜು ಹಾಗೂ ಸೌತ್ ಕೆನರಾ ಫಿಸಿಯೋಥೆರಪಿ ಶಿಕ್ಷಕರ ಸಂಘ ಇವುಗಳ ಸಹಭಾಗಿತ್ವದಲ್ಲಿ “ರಕ್ತದಾನ ಶಿಬಿರವು” 19 ಸೋಮವಾರದಂದು ಯೆನೆಪೋಯ ಸಭಾಂಗಣದಲ್ಲಿ ನಡೆಯಿತು.
ಸನ್ಮಾನ್ಯ ಶ್ರೀ. ಬಸವರಾಯ ರೆಡ್ಡಿ, ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಈ ಶಿಬಿರವನ್ನು ಉದ್ಘಾಟಿಸಿದರು. ಅವರು ಉದ್ಘಾಟನಾ ಭಾಷಣದಲ್ಲಿ ವಿಶ್ವವಿದ್ಯಾಲಯ ಕೈಗೊಂಡಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿ ರಕ್ತದಾನವು ಇನ್ನೋರ್ವ ವ್ಯಕ್ತಿಗೆ ಬದುಕನ್ನು ನೀಡುವ ಪುಣ್ಯ ಕಾರ್ಯವಾಗಿದೆ. ದೇಶದಲ್ಲಿ ಅಪಘಾತ ಹಾಗೂ ರೋಗಗಳಿಂದಾಗಿ ರಕ್ತಕ್ಕೆ ಬಹಳ ಬೇಡಿಕೆ ಇದೆ. ರಕ್ತದಾನವು ಒಂದು ಪವಿತ್ರ ಕಾರ್ಯವಾಗಿರುವುದರಿಂದ ರಕ್ತದಾನ ಶಿಬಿರಗಳ ಅಗತ್ಯ ಬಹಳ ಇದೆ. ಈ ಹಿನ್ನೆಲೆಯಲ್ಲಿ ಯೆನೆಪೋಯ ವಿಶ್ವವಿದ್ಯಾನಿಲಯದ ಸೇವೆ ಶ್ಲಾಘನಾರ್ಹ ಎಂದು ಅಭಿಪ್ರಾಯ ಪಟ್ಟರು.

ಯೆನೆಪೋಯವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಎಂ. ವಿಜಯಕುಮಾರ್ ಅತಿಥಿಗಳನ್ನು ಸ್ವಾಗತಿಸಿ ರಕ್ತದಾನ ಶಿಬಿರದ ಮಹತ್ವದ ಬಗ್ಗೆ ಸ್ಥೂಲವಾಗಿ ವಿವರಿಸಿದರು. ಕರ್ನಾಟಕ ಸರ್ಕಾರದ ಆಹಾರ ಸರಬರಾಜು ಮತ್ತು ನಾಗರಿಕ ಮಂತ್ರಿಗಳಾದ ಸನ್ಮಾನ್ಯ ಶ್ರೀ. ಯು. ಟಿ. ಖಾದರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಶ್ರೀಕುಮಾರ್ ಮೆನನ್ ವಂದಿಸಿದರು. 100 ಕ್ಕಿಂತ ಅಧಿಕ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನವನ್ನು ಮಾಡಿದರು.
ಯೆನೆಪೋಯ ವಿಶ್ವವಿದ್ಯಾನಿಲಯದ ವಿತ್ತಾ ಅಧೀಕ್ಷಕರಾದ ಶ್ರೀಯುತ ಫರ್ಹಾಧ್ ಯೆನೆಪೋಯ,ವಿತ್ತಾಧಿಕಾರಿ ಮೊಹಮ್ಮದ್ ಬಾವ , ವಿಶ್ರಾಂತ ಉಪಕುಲಪತಿಯಾದ (ಕಣ್ಣೂರ್, ಕಲ್ಲಿಕೋಟೆ) ಪ್ರೊ. ಅಬ್ದುಲ್ ರಹಿಮಾನ್ , ಯೆನೆಪೋಯ ಪೀಸಿಯೊಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಯೆಸ್ ಪದ್ಮ ಕುಮಾರ್ , ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಆಶಾ ಪಿ. ಶೆಟ್ಟಿ, ಉಪ ಕುಲಸಚಿವರಾದ ಡಾ. ಅಬ್ದುಲ್ ರಹಿಮಾನ್ ಹಾಗು ಇತರರು ಉಪಸ್ಥಿತರಿದ್ದರು. ಮಿಸ್ ವೀಣ ಪೈಸ್ ಮತ್ತು ಮಿಸ್ ಸ್ಮಿತ ಕಾರ್ಯಕ್ರಮ ನಿರೂಪಿಸಿದರು.

