ಮಂಗಳೂರು: ಮಂಗಳೂರು ನಂತಹ ಮಹಾನಗರಗಳಲ್ಲಿ ನಡೆದಿದ್ದ ವಿಶ್ವ ಮಟ್ಟದ ತುಳು ಸಮ್ಮೇಳನ ಈಗ ನಮ್ಮ ನಾಡಿನಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಭಾಗ್ಯ. ತುಳುನಾಡಿನ ಶಕ್ತಿ, ಸಂಸ್ಕøತಿ ಆಚಾರ ವಿಚಾರಗಳನ್ನು ವಿಶ್ವಕ್ಕೆ ತೋರಿಸಿಕೊಡುವ ಸೌಭಾಗ್ಯ ನಮ್ಮ ಪಾಲಿಗೆ ದೊರೆತಿದೆ. ತುಳು ಭಾಷೆ ಮಾತನಾಡುವವರು ಮಾತ್ರ ತುಳುವರಲ್ಲ ತುಳುನಾಡಿನಲ್ಲಿರುವ ನಾವೇಲ್ಲರೂ ತುಳುವರೇ ಆದುದರಿಂದ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ ಎಂದು ಹಿರಿಯ ಉದ್ಯಮಿ ಶಾಂತಾರಾಮ ಶೆಣೈ ಅಭಿಪ್ರಾಯಪಟ್ಟರು.

ವಿಶ್ವ ತುಳುವೆರೆ ಆಯನೊದ ಕಾರಡ್ಕ ಪಂಚಾಯತು ಸಮಿತಿ ರಚನಾ ಸಭೆಯಲ್ಲಿ ಶೆಣೈ ಮಾತನಾಡಿದರು. ಮುಳ್ಳೇರಿಯ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಈ ನಾಡಿನಲ್ಲಿರುವ ಎಲ್ಲರಿಗೂ ಇದೆ. ಮುಳ್ಳೇರಿಯ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಸಂಪೂರ್ಣ ಬೆಂಬಲವಿದೆ ಎಂದರು.
ಹಿರಿಯ ನಾಗರಿಕ ವೇದಿಕೆಯ ಗೋಪಾಲಕೃಷ್ಣ ಭಟ್, ಶಿವಕೃಷ್ಣ ಭಟ್, ನಿವೃತ್ತ ಮುಖ್ಯೋಪಾಧ್ಯಾಯ ಚಂದು ಮಾಸ್ಟರ್, ಕಾರ್ಲೆ ವಿಶ್ವನಾಥ ಶೆಟ್ಟಿ, ಶ್ರೀಧರನ್ ಬೇಂಗತ್ತಡ್ಕ, ಪಿ.ಕೆ ಮೋಹನ ಟೈಲರ್, ರವೀಂದ್ರ ರೈ ಮಲ್ಲಾವರ, ವಿಶ್ವ ತುಳುವೆರೆ ಆಯನೊದ ಕಾರ್ಯಾಧ್ಯಕ್ಷ ಪ್ರೋ .ಶ್ರೀನಾಥ್ ಕಾಸರಗೋಡು, ಡಾ| ರಾಜೇಶ್ ಆಳ್ವ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.
ತುಳುವೆರೆ ಆಯನೊ ಕೂಟದ ಸಂಚಾಲಕ ಸುಧೀರ್ ಕುಮಾರ್ ರೈ ಮುಳ್ಳೇರಿಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಳ್ಳೇರಿಯ ಮೇಲ್ವಿಚಾರಕ ರಮೇಶ್ ವಂದಿಸಿದರು.
