ಕಿನ್ನಿಗೋಳಿ; ಸಮಾಜ ವಿರೋಧಿ ಪುಂಡಾಟಿಕೆ ಮತ್ತು ಒಂದು ವರ್ಗದ ಪರ ಹೇಳಿಕೆಗಳನ್ನು ಹಿಂದೂ ಸಮಾಜವು ಸಮರ್ಥವಾಗಿ ಎದುರಿಸಲಿದ್ದು, ನಕಲಿ ಮುಖವಾಡ ಹಾಕಿರುವ ಜನಸೇವಕರ ಹಾಗೂ ನೈತಿಕತೆ ಇಲ್ಲದವರ ವಿರುದ್ಧ ಹಿಂದೂ ಸಂಘಟನೆಗಳು ನಿರಂತರ ಹೋರಾಟ ನಡೆಸಲಿದೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಮುಖ ಸತ್ಯಜಿತ್ ಸುರತ್ಕಲ್ ಹೇಳಿದರು.
ಮಂಗಳವಾರ ಪಕ್ಷಿಕೆರೆಯ ಮುಖ್ಯಪೇಟೆಯಲ್ಲಿ ಕೆಮ್ರಾಲ್ ಮಂಡಲ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಅಕ್ರಮ ಗೋಸಾಗಾಟ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯನ ಅನೈತಿಕ ಚಟುವಟಿಕೆಯ ವಿರುದ್ಧ ಮಂಗಳವಾರ ನಡೆದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಸಮಾಜದಲ್ಲಿ ಕಳಂಕಿತನಾದ ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜಿಲ್ಲೆಯ ಕೆಲವು ಸಚಿವರು ಅಕ್ರಮ ಚಟುವಟಿಕೆಗೆ ಬೆಂಬಲ ನೀಡುವ ಕಾಯಕದಲ್ಲಿದ್ದಾರೆ. ಅಕ್ರಮ ಗೋಸಾಗಾಟ, ಟೋಲ್ಗೇಟ್ ಧ್ವಂಸಕ್ಕೆ ಪ್ರೇರಣೆ, ಹೆಣ್ಣು ಮಕ್ಕಳ ಮಾನಹರಣ, ಹವಾಲ ದಂಧೆಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ಎಂದು ಆರೋಪಿಸಿದರು.,
ಎಎನ್ಎಫ್ ಯೋಧನ ಗುಂಡಿಗೆ ಬಲಿಯಾದ ಕಬೀರ್ ಅಮಾಯಕನಲ್ಲ ಆದರೆ ಸುಳ್ಳು ಅಪವಾದ ಮಾಡಿ ಅಮಾಯಕ ಎಎನ್ಎಫ್ ಯೋಧ ನವೀನ್ನನ್ನು ಜೈಲಿಗೆ ಅಟ್ಟಿದ್ದು ವಿಷಾದನೀಯ. ದನ ಕಳ್ಳನಿಗೆ ಪರಿಹಾರವಾಗಿ ನೀಡಿದ ಹಣವನ್ನು ಕೂಡಲೆ ಸರಕಾರ ಹಿಂದೆ ಪಡೆಯಬೇಕು, ರಾಜಕಾರಣಿಗಳ ಕುಟಿಲತನಕ್ಕೆ ಕಬೀರ್ ಪ್ರಕರಣ ಸಾಕ್ಷಿಯಾಗಿದೆ, ಜಿಲ್ಲೆಯ ಕಾಂಗ್ರೇಸ್ ಮಹಾನ್ ನಾಯಕರಿಗೆ ಕಬೀರನ ಮನೆಗೆ ಹೋಗಿ ಕಣ್ಣೀರು ಸುರಿಸಲು ಸಮಯವಿದ್ದರೆ ದೇಶ ರಕ್ಷಣೆ ಕಾರ್ಯ ಮಾಡಿ ದೇಶದ ಗಡಿ ಪ್ರದೇಶದಲ್ಲಿ ಜೀವತೆತ್ತ ಸೈನಿಕ ಮುಕುಂದ ನಾಯಕ್ನ ಶವ ಸಂಸ್ಕಾರ ಹಾಗೂ ಗೌರವ ನೀಡಲು ಇವರಿಗೆ ಪುರುಸೋತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬುದ್ದಿಜೀವಿಗಳೆಂಬ ಸ್ವಘೋಷಿತ ಹಣೆಪಟ್ಟಿ ಅಂಟಿಸಿಕೊಂಡಿರುವ ಡೋಂಗಿ ಜಾತಿ-ಅತೀತರು (ಜಾತ್ಯಾತೀತರು) ಅಲ್ಲದೆ ಕೆಲವು ಸಂಘಟನೆಗಳು ನಕ್ಸಲ್ ವಾದದ ಪ್ರೇರಕರಂತೆ ವರ್ತಿಸುತ್ತಿರುವುದು ಖಂಡನೀಯ ಹಾಗಾಗಿ ಇಂದು ಸಮಾಜದಲ್ಲಿ ದುಗುಡ ಅಶಾಂತಿ ನೆಲೆ ನಿಂತಿದೆ ಎಂದರು.
ಹಿಂದು ಜಾಗರಣ ವೇದಿಕೆಯ ಅಧ್ಯಕ್ಷ ದಿನೇಶ್ ಹರಿಪಾದೆ, ಸಂಚಾಲಕ ಅಮರ್ ಶೆಟ್ಟಿ, ಪ್ರಮುಖರಾದ ವಿನೋದ್ ಬೊಳ್ಳೂರು, ಸಚಿನ್ ಶೆಟ್ಟಿ, ರಾಜೇಶ್ ದಾಸ್, ಸುಧಾಕರ ಶೆಟ್ಟಿ, ರಾಮದಾಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

