ಮುಂಬಯಿ, ನ.01: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್ಕೆಬಿ ಚಿಸೋಸಿಯೇಶನ್ ಸಾಯನ್, ಗೋಕುಲದಲ್ಲಿ ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಕಳೆದ ಗುರುವಾರ ಮಹಾನವಮಿ ದಿನ ಸಾಯಂಕಾಲ ದೀಪಾರಾಧನೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಾಗೂ ವೈಭವದಿಂದ ಆಚರಿಸಿತು.


ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಅಂಬಿಕಾ ದೇವಸ್ಥಾನ ವಿದ್ಯಾವಿಹಾರ್ನ ಪ್ರಧಾನ ಅರ್ಚಕ ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್ ಅವರ ಪ್ರಾಯೋಜಕತ್ವದಲ್ಲಿ ವಿದ್ವಾನ್ ಸುಧೀರ್ ರಾವ್, ವಿದುಷಿ ಮಾನಸಿ ಸುಧೀರ್ ಅವರ ನಿರ್ದೇಶನದಲ್ಲಿ, `ನೃತ್ಯ ನಿಕೇತನ’ ಕೊಡವೂರು ಉಡುಪಿ ಅವರಿಂದ `ನೃತ್ಯ ಸಿಂಚನ’ ಭರತನಾಟ್ಯ ವೈಭವ ಹಾಗೂ ನಾರಾಯಣ ಸರಳಾಯ, ಆಸ್ಥಾನ ಗಾಯಕರು, ಶ್ರೀ ಕೃಷ್ಣ ಮಠ, ಉಡುಪಿ ಮತ್ತು ವಿದ್ವಾನ್ ಸುಧೀರ್ ರಾವ್ ಕೊಡವೂರು ಇವರಿಂದ `ದಾಸವಾಣಿ’ ಭಕ್ತಿ ಸಂಗೀತ ಕಾರ್ಯಕ್ರಮವು ನೆರವೇರಿತು. ಶ್ರೀಧರ ಆಚಾರ್ಯ ಹಾಗೂ ದೇವೇಶ ಭಟ್ ವಾಯಲಿನ್ ಮತ್ತು ಮೃದಂಗದಲ್ಲಿ ಸಹಕರಿಸಿದರು.
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ಕಾರ್ಯದರ್ಶಿ ಎ.ಎಸ್ ರಾವ್, ಸುಧೀರ್ ರಾವ್, ಮಾನಸಿ ಸುಧೀರ್, ನಾರಾಯಣ ಸರಳಾಯ ಹಾಗೂ ಹಿಮ್ಮೆಳದವರಿಗೆ ಪುಷ್ಪಗುಚ್ಛವನ್ನಿತ್ತು ಗೌರವಿಸಿದರು. ಪ್ರೇಮಾ ರಾವ್ ಕಲಾವಿದರನ್ನು ಸ್ವಾಗತಿಸಿ ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಗೈದರು.
ಸಂಜೆ ದೀಪಾರಾಧನೆಯ ಪೂಜಾವಿಧಿವಿಧಾನಗಳನ್ನು ವೇದಮೂರ್ತಿ ಕೃಷ್ಣರಾಜ ಉಪಾಧ್ಯಾಯರು ಇತರ ಪುರೋಹಿತ ವರ್ಗದವರೊಂದಿಗೆ ವಿಧಿವತ್ತಾಗಿ ನೆರವೇರಿಸಿದರು. ಯಜಮಾನ ಸ್ಥಾನವನ್ನು ಶ್ರೀ ವಾಮನ ಹೊಳ್ಳ ಹಾಗೂ ಜಯಲಕ್ಷಿ ಹೊಳ್ಳ ದಂಪತಿ ವಹಿಸಿದ್ದರು. ಮಹಾ ಮಂಗಳಾರತಿ ನಂತರ ದೀಪಾರಾಧನೆಯ ಅಂಗವಾಗಿ ಕನ್ನಿಕೆ ಮತ್ತು ಸುವಾಸಿನಿ ಪೂಜೆಯನ್ನು ವಾಮನ ಹೊಳ್ಳ ದಂಪತಿ ನೆರವೇರಿಸಿದರು. ಕನ್ನಿಕಾ ಸ್ಥಾನವನ್ನು ಕುಮಾರಿ ದೀತ್ಯಾ, ಹಾಗೂ ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾ ಸರಸ್ವತಿಯ ಸ್ಥಾನವನ್ನು ವೀಣಾ ಕಾರಂತ್, ಗೀತಾ ಕೆ.ಭಟ್, ಮತ್ತು ಲಲಿತಾ ರಾವ್ ಅಲಂಕರಿಸಿದ್ದರು. ಬದ್ರಿನಾರಾಯಣ ಪಿಲಿಂಜೆ ಮತ್ತು ಪೂರ್ಣಿಮಾ ದಂಪತಿ ಸಹಯೋಗದಲ್ಲಿ ಕನ್ನಿಕೆ ಹಾಗೂ ಸುವಾಸಿನಿ ಪೂಜೆ ನಡೆಸಲ್ಪಟ್ಟಿತು. ಶಾರದಾ ಪೂಜೆಯನ್ನು ಭುಜಂಗ ರಾವ್ ಸಭಾಗೃಹದಲ್ಲಿ ಆಯೋಜಿಸಲಾಗಿತ್ತು. ವೇದಮೂರ್ತಿ ಬಾಲಕೃಷ್ಣ ಉಡುಪರು ಶ್ರೀ ಶಾರದಾ ದೇವಿಗೆ ಮಂಗಳಾರತಿಗೈದರು. ದೀಪಾರಾಧನೆಯ ಸೇವಾರ್ಥಿಗಳಿಗೆ ಹಾಗೂ ನೆರೆದ ನೂರಾರು ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಸಂಪನ್ನವಾಯಿತು. .




