ಮಂಗಳೂರು: ಮೆರಿಟ್ ವಿದ್ಯಾರ್ಥಿಗಳ ತವರೆನಿಸಿರುವ ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ತನ್ನ ಗರಿಮೆಯನ್ನು ಉಳಿಸಿಕೊಂಡಿದೆ. ಈ ಬಾರಿ ಕೂಡಾ ದಕ್ಷಿಣ ಕನ್ನಡ ಶೇ.93.09 ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ.
ಅವಿಭಜಿತ ಕನ್ನಡ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಮೊದಲ ಮೂರು ಸ್ಥಾನ ಪಡೆದಿರುವುದು ಈ ಬಾರಿಯ ವಿಶೇಷ. ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿನಿ ರಶ್ಮಿತಾ (ನೋಂದಣಿ ಸಂಖ್ಯೆ 255607) ಕಾಮರ್ಸ್ ವಿಭಾಗದಲ್ಲಿ ಟಾಪರ್ ಆಗಿದ್ದಾರೆ. ಭಾಷಾ ವಿಷಯಗಳನ್ನು ಬಿಟ್ಟರೆ ಮಿಕ್ಕ ನಾಲ್ಕು ಸಬ್ಜೆಕ್ಟ್ ನಲ್ಲೂ ನೂರಕ್ಕೆ ನೂರು ಗಳಿಸಿದ ಸಾಧನೆ ಮೆರೆದಿದ್ದಾರೆ. 600ಕ್ಕೆ 593 ಗಳಿಸಿದ್ದಾರೆ.[ಪಿಯು ಜಿಲ್ಲಾವಾರು ರಿಸಲ್ಟ್: ದಕ್ಷಿಣ ಕನ್ನಡ 1, ಗದಗ 21] ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯವರು ಟಾಪರ್ ಏಕೆ? ಎಂಬ ಪ್ರಶ್ನೆಗೆ ಕಳೆದ ಬಾರಿ ವಿಜ್ಞಾನ ವಿಭಾಗದ ಟಾಪರ್ ಪೂಜಾ ಬಾಳಿಗ ಅವರು ಕೊಟ್ಟ ಉತ್ತರ ಇಲ್ಲಿ ಉಲ್ಲೇಖನೀಯ. “ಇದಕ್ಕೆ ಇಲ್ಲಿನ ಶಿಕ್ಷಕ ವೃಂದವೇ ಕಾರಣ ಎನ್ನಬಹುದು. ಜತೆಗೆ ವಿದ್ಯಾರ್ಥಿ ಸಮೂಹ ಕೂಡಾ ಶಿಕ್ಷಕರೊಡನೆ ಉತ್ತಮ ಬಾಂಧವ್ಯ ಹೊಂದಿದ್ದು ವ್ಯಾಸಂಗದಲ್ಲಿ ಈ ಪರಿ ಏಳಿಗೆ ಕಾಣಲು ಕಾರಣವಾಗಿದೆ ಎಂದಿದ್ದರು”. ಅದು ರಶ್ಮಿತಾ ವಿಷಯದಲ್ಲೂ ನಿಜವಾಗಿದೆ. ಮನೆಯಲ್ಲಿ ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದ ರಶ್ಮಿತಾ ಜಿಲ್ಲೆಗೆ ಟಾಪರ್ ಆಗಿ ಕಾಮರ್ಸ್ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ್ದು ಪೋಷಕರಿಗೆ ಅಚ್ಚರಿ ಮೂಡಿಸಿದರೂ ಮಗಳ ಪ್ರತಿಭೆ ಬಗ್ಗೆ ನಂಬಿಕೆ ಇತ್ತು ಎಂದಿದ್ದಾರೆ.





