ಮುಂಬೈ: 12ರ ಹರೆಯದ ಮರ್ಯಾಮ್ ಸಿದ್ಧಿಕಿ ರಾಂಕ್ ಪಡೆಯುವ ವಿದ್ಯಾರ್ಥಿನಿ. ಆದರೆ ಈ 6ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿನಿ ಇತ್ತೀಚೆಗೆ ನಡೆದ ಭಗವದ್ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಕಳೆದ ಜನವರಿ ತಿಂಗಳಿನಲ್ಲಿ ಇಸ್ಕಾನ್ ಸಂಸ್ಥೆ ಗೀತಾ ಚಾಂಪಿಯನ್ಸ್ ಲೀಗ್ ಎಂಬ ಸ್ಪರ್ಧೆಯನ್ನು ಏರ್ಪಡಿಸಿತ್ತು. ಇದರಲ್ಲಿ ಸುಮಾರು 3 ಸಾವಿರ ಮಂದಿ ಭಾಗವಹಿಸಿದ್ದರು. ಈ ಭಗವದ್ಗೀತೆ ಸ್ಪರ್ಧೆಯಲ್ಲಿ ಸಿದ್ಧಿಕಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಭಗವದ್ಗೀತೆ ಬಗ್ಗೆ ಮಕ್ಕಳಲ್ಲಿರುವ ಜ್ಞಾನ ಎಷ್ಟಿದೆ ಎಂಬ ಕುರಿತು ನಡೆದ ಪರೀಕ್ಷೆಯಲ್ಲಿ ನೂರು ಅಂಕಗಳ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು. ನನ್ನ ಫ್ರೀ ಟೈಮ್ ನಲ್ಲಿ ಭಗವದ್ಗೀತೆಯನ್ನು ಓದುತ್ತಿದ್ದೆ. ಹಾಗಾಗಿ ನನ್ನ ಟೀಚರ್ ನನಗೆ ನೀನು ಈ ಸ್ಪರ್ಧೆಯಲ್ಲಿ ಭಾಗವಹಿಸು ಎಂದು ಹೇಳಿದ್ದರು. ಭಗವದ್ಗೀತೆ ಬಗ್ಗೆ ತಿಳಿದುಕೊಳ್ಳಲು ಇದೊಂದು ಒಳ್ಳೆ ಅವಕಾಶ ಎಂದುಕೊಂಡೆ. ಆ ನಿಟ್ಟಿನಲ್ಲಿ ಭಗವದ್ಗೀತೆ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ತಂದೆ, ತಾಯಿಯೂ ನನಗೆ ಬೆಂಬಲ ನೀಡಿದ್ದರು ಎಂಬುದಾಗಿ ಮಾರ್ಚ್ 15ರಂದು ಪ್ರಶಸ್ತಿ ಸ್ವೀಕರಿಸಿದ ಸಿದ್ದಿಕಿ ತನ್ನ ಖುಷಿಯನ್ನು ಹಂಚಿಕೊಂಡಿದ್ದಾರೆ.
ಮುಂಬೈನ ಮೀರಾ ರೋಡ್ ಕಾಸ್ಮೋಪೊಲಿಟನ್ ಹೈಸ್ಕೂಲ್ ನಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಮರ್ಯಾಮ್ ಸಿದ್ದಿಕಿ. ಇಸ್ಕಾನ್ ನವರು ಸಿದ್ದಿಕಿಗೆ ಭಗವದ್ಗೀತೆಯ ಇಂಗ್ಲೀಷ್ ಪುಸ್ತಕವನ್ನು ನೀಡಿದ್ದರು. ನಾನು ಆ ಪುಸ್ತಕವನ್ನು ಓದಿದೆ.
ಭಗವದ್ಗೀತೆ ಏನನ್ನು ಹೇಳಲು ಹೊರಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ನಾನು ವಿವಿಧ ಧರ್ಮಗಳ ಬಗ್ಗೆ ಓದಿದ್ದೆ, ಇದರಿಂದ ತಿಳಿದು ಬಂದಿದ್ದೇನೆಂದರೆ ಮಾನವೀಯತೆ ತುಂಬಾ ಮುಖ್ಯವಾದದ್ದು ಎಲ್ಲಾ ಧರ್ಮದ ತಿರುಳಾಗಿದೆ. ನಾವು ಇದನ್ನು ಅನುಸರಿಸಬೇಕು ಎಂದು ಸಿದ್ದಿಕಿ ಹೇಳಿದ್ದಾಳೆ.
ಎಲ್ಲಾ ಧರ್ಮವನ್ನು ಒಪ್ಪಿಕೊಳ್ಳಬೇಕು ಎಂಬುದನ್ನು ನಮ್ಮ ಕುಟುಂಬ ನಂಬುತ್ತದೆ. ಅಲ್ಲದೇ ಯಾವ ಧರ್ಮವೂ ತಪ್ಪು ಬೋಧನೆ ಮಾಡುವುದಿಲ್ಲ. ಏನೇ ಆಗಲಿ ಕೆಲವು ಜನರು ಧರ್ಮ ಸಂದೇಶವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಈ ಬೆಳವಣಿಗೆ ಎಳೆ ಮನಸ್ಸುಗಳ ಮೇಲೆ ಪರಿಣಾಮ ಬೀರುತ್ತದೆ. ನಾವು ಧರ್ಮದ ಬಗ್ಗೆ ಮಾತನಾಡಬೇಕು ಮತ್ತು ಯಾವುದು ಸರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸಿದ್ದಿಕಿ ತಂದೆ ಅಸೀಫ್ ಸಿದ್ದಿಕಿ.

