ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿಬಂದೋಬಸ್ತಿನ ನಡುವೆಯೂ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದ್ದು, ತೊಕ್ಕೊಟ್ಟು ಟಿ.ಸಿ.ರೋಡಿನಲ್ಲಿ ಟೈಲರ್ ಅಂಗಡಿಗೆ ಬೆಂಕಿ ಹಾಕಿರುವುದಲ್ಲದೆ ಹಲವೆಡೆ ಬ್ಯಾನರ್ ಗಳನ್ನು ಹರಿದು ಹಾಕಿರುವ ಘಟನೆ ನಡೆದಿದೆ.
ತೊಕ್ಕೊಟ್ಟು ಒಳಪೇಟೆಯ ಟಿ.ಸಿ.ರೋಡಿನಲ್ಲಿರುವ ವಾಸುದೇವ ಪೂಜಾರಿ ಎಂಬವರಿಗೆ ಸೇರಿದ ನಿತ್ಯಾನಂದ ಟೈಲರ್ ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಘಟನೆಯಿಂದ ಅಂಗಡಿಗೆ ಹೊಲಿಯಲು ಕೊಟ್ಟಿದ್ದ ಹಾಗೂ ಹೊಲಿಗೆ ಹಾಕಲಾಗಿದ್ದ ಬಟ್ಟೆಗಳು ಸಂಪೂರ್ಣ ಸುಟ್ಟುಹೋಗಿದ್ದು, ರೂ. 2ಲಕ್ಷ ನಷ್ಟ ಸಂಭವಿಸಿದೆ. ಶುಕ್ರವಾರ ತಡರಾತ್ರಿ ಅಂಗಡಿಗೆ ಬೆಂಕಿ ಹಾಕಲಾಗಿದ್ದು, ಛಾಯಗ್ರಾಹಕರೊಬ್ಬರು ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಘಟನೆ ಬೆಳಕಿಗೆ ಬಾರದೇ ಇದ್ದಲ್ಲಿ, ಅಂಗಡಿಗೆ ತಾಗಿ ಬೀಡಿ ಬ್ರಾಂಚ್ ಮತ್ತು ಹಿಂಬದಿ ಭಾಗದಲ್ಲಿ ಮನೆಗಳು ಇದ್ದು , ಎಲ್ಲವೂ ಬೆಂಕಿಗೆ ಆಹುತಿಯಾಗುತಿತ್ತು. ಘಟನಾ ಸ್ಥಳಕ್ಕೆ ಡಿಸಿಪಿಗಳಾದ ಕೆ.ಸಂತೋಷ್ ಬಾಬು, ಎನ್.ವಿಷ್ಣುವರ್ಧನ್, ಎಸಿಪಿ ಕಲ್ಯಾಣ್ ಶೆಟ್ಟಿ , ಉಳ್ಳಾಲ ಠಾಣೆಯ ಸವಿತ್ರ ತೇಜ ಹಾಗೂ ಎಸ್.ಐ ಭಾರತಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬ್ಯಾನರ್ಗೆ ಹಾನಿ : ಅಂಬ್ಲಮೊಗರು, ಕೊಣಾಜೆ, ಕುಂಪಲ, ಮಡ್ಯಾರು, ಮಾಡೂರು ಪ್ರದೇಶಗಳಲ್ಲಿ ಹಿಂದು ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಿಂದು ಸಮಾಜೋತ್ಸವಕ್ಕಾಗಿ ಹಾಕಿರುವ ಬ್ಯಾನರುಗಳನ್ನು ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಬ್ಲೇಡಿನಿಂದ ಹರಿದು ಹಾನಿಗೊಳಿಸಿರುವ ಘಟನೆಯೂ ನಡೆದಿದೆ.
ಸೆಕ್ಷನ್ ನಡುವೆಯೂ ಕೃತ್ಯ: ಕೆ.ಸಿ.ರೋಡು ಗಲಾಟೆ, ತೊಕ್ಕೊಟ್ಟು 13 ಅಂಗಡಿಗಳಿಗೆ ಬೆಂಕಿ ಹಾಕಿದ ಪ್ರಕರಣ, ಹಿಂದು ಸಮಾಜೋತ್ಸವ ಹಿನ್ನೆಲೆಯಲ್ಲಿ ಉಳ್ಳಾಲದಾದ್ಯಂತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ ಸೆಕ್ಷನ್ 144 ಜಾರಿಯಲ್ಲಿದ್ದು, ಕೆಎಸ್ ಆರ್ ಪಿ ಪೊಲೀಸರು, ಹೆಚ್ಚುವರಿ ಪೊಲೀಸರು ಬಿಗಿ ಬಂದೋಬಸ್ತ್ ನಡೆಸುತ್ತಿದ್ದಾರೆ. ಆದರೂ ಕಿಡಿಗೇಡಿಗಳ ಕೃತ್ಯ ನಡೆಯುತ್ತಿರುವ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುವಂತಾಗಿದೆ.

ಕಠಿಣ ಕ್ರಮಕೈಗೊಳ್ಳಿ: ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಕೆಲಸ ಕಿಡಿಗೇಡಿಗಳು ಮಾಡುತ್ತಿದ್ದಾರೆ. ಎಲ್ಲಾ ಸಮುದಾಯವರು ಇಂತಹ ಕೃತ್ಯಗಳಿಗೆ ಕಿವಿಗೊಡದೆ, ಜತೆಯಾಗಿ ಬಾಳುವ ಕೆಲಸ ಮಾಡಬೇಕು. ಪೊಲೀಸ್ ಇಲಾಖೆ ಹೆಚ್ಚಿನ ಸಿಬ್ಬಂದಿಯನ್ನು ಪ್ರದೇಶದಲ್ಲಿ ನೇಮಿಸಬೇಕು.
ಸಹೋದರತೆಯಿಂದ ಬಾಳಬೇಕಿದೆ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಮಾತನಾಡಿ ಹಿಂದು ಧಾರ್ಮಿಕ ಕಾರ್ಯಕ್ರಮಗಳು, ಸಮಾಜೋತ್ಸವ ಹಾಗೂ ಸದ್ಯದಲ್ಲೇ ಉರೂಸು ಸಮಾರಂಭ ಉಳ್ಳಾಲದಲ್ಲಿ ನಡೆಯಲಿದೆ. ಜನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿವವರಿದ್ದು, ಸಹೋದರತೆಯಿಂದ ಬಾಳುತ್ತಿದ್ದಾರೆ. ಯಾರೋ ಕಿಡಿಗೇಡಿಗಳು ನಡೆಸುವ ಕೃತ್ಯಗಳನ್ನು ಜನ ಮನಸ್ಸನ್ನು ಹಾಳು ಮಾಡಬಾರದು. ಅಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು.
ರಾತ್ರಿ 8 ಗಂಟೆಗೆ ವಿಷಯ ಗೊತ್ತಾಗಿದೆ. ಅಂಗಡಿಯಲ್ಲಿದ್ದ ಎಲ್ಲಾ ಸೊತ್ತುಗಳು ಸಂಪೂರ್ಣ ನಾಶವಾಗಿದೆ. ರೂ. 2 ಲಕ್ಷ ನಷ್ಟ ಸಂಭವಿಸಿದೆ.










