ಉಳ್ಳಾಲ: ವಿಷಾಹಾರ ಸೇವಿಸಿ ದೇರಳಕಟ್ಟೆ ಅಲ್ಪಸಂಖ್ಯಾತರ ಬಾಲಕಿಯರ ಮೊರಾರ್ಜಿ ವಸತಿ ಶಾಲೆಯ ಒಂಭತ್ತು ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿ ಹೊರಗುತ್ತಿಗೆ ನೆಲೆಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಐವರನ್ನು ವಜಾಗೊಳಿಸಲಾಗಿದೆ .

ವಿದ್ಯಾರ್ಥಿಗಳಾದ ಅಮೀನಾ, ಅಶ್ರೀಫಾ, ಆರಿಫಾ, ಕಾವ್ಯ, ಅಫ್ರೀನಾ , ಅಕ್ಷಿತಾ, ತಾಹಿರಾ, ಶೈನಾಝ್ , ರಕ್ಷಾ, ನಿಶ್ಮಿತಾ.ಕೆ, ಅಜ್ಮಿಯಾ, ನಫೀಯತ್, ಫಾಯಿಝಾ, ಷಹನಾಝ್, ಕುಬ್ರಾ, ಅಲ್ಫೀಯಾ, ತಾಹಿರಾ, ರಂಸೀನಾ, ಹರ್ಷಿಣಿ, ಭವೀನಾ, ಆಯೇಷಾ ಅಸ್ವಸ್ಥಗೊಂಡವರು.ವಿದ್ಯಾರ್ಥಿಗಳ ಆಸ್ಪತ್ರೆಗೆ ದಾಖಲಿಸಲಾಗುತಿತ್ತು.
ಮಧ್ಯಾಹ್ನದ ಊಟ ಸೇವಿಸಿದ 9 ಮಂದಿ ವಿದ್ಯಾರ್ಥಿನಿಯರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಸ್ವಲ್ಪ ಹೊತ್ತಿನಲ್ಲಿ ವಾಂತಿ ಮಾಡಲು ಆರಂಭಿಸಿದ್ದರು. ಕೂಡಲೇ ಶಿಕ್ಷಕಿಯರು ಅಲ್ಪಸಂಖ್ಯಾತ ಇಲಾಖಾಧಿಕಾರಿಯವರಿಗೆ ಮಾಹಿತಿ ನೀಡಿದ್ದರು. ಅವರ ನಿರ್ದೇಶನದಂತೆ ಸ್ಥಳಕ್ಕೆ ಯೆನೆಪೋಯ ಆಸ್ಪತ್ರೆ ವೈದ್ಯರು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ವಿಷಾಹಾರ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಕುರಿತು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ.
ಐವರ ಅಮಾನತು : ವಾಸನೆಯುಕ್ತ ಆಹಾರವನ್ನು ವಿದ್ಯಾರ್ಥಿಗಳಿಗೆ ಅಡುಗೆ ಸಹಾಯಕರು ನೀಡುತ್ತಿರುವ ಮಾಹಿತಿ ಹಿಂದೆಯೂ ಬಂದಿತ್ತು. ಅದಕ್ಕಾಗಿ ಅಡುಗೆ ಸಹಾಯಕರು ಹಾಗೂ ಶಿಕ್ಷಕಿಯರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಸೋಮವಾರದಂದು ಊಟ ಸೇವಿಸಿದ ಮಕ್ಕಳಲ್ಲಿ ವಾಂತಿ ಆರಂಭವಾಗಿದ್ದು, ಇದರ ವಿರುದ್ಧ ಎಚ್ಚೆತ್ತ ಅಲ್ಪಸಂಖ್ಯಾತ ಇಲಾಖಾಧಿಕಾರಿ ಸಾಬೀರ್ ಮುಲ್ಲಾ ಅವರು ಗುತ್ತಿಗೆ ಆಧಾರದಡಿ ಕೆಲಸ ನಿರ್ವಹಿಸುತ್ತಿದ್ದ ವಾರ್ಡನ್ ಸಹಿತ ನಾಲ್ವರು ಅಡುಗೆ ಸಹಾಯಕಿಯರನ್ನು ವಜಾಗೊಳಿಸಿದ್ದಾರೆ.
